ದಾವಣಗೆರೆ: ರಾಜ್ಯದಲ್ಲಿ ಬರ ಇರುವಾಗ ಬಸ್ಪಾಸ್ ದರ ಹೆಚ್ಚಳ ಮಾಡುವ ನಿರ್ಧಾರವನ್ನು ಕೈಬಿಡಬೇಕು ಎಂದು ಒತ್ತಾಯಿಸಿ ನಗರದ ಕೆಎಸ್ಆರ್ಟಿಸಿ ಕಚೇರಿ ಎದುರು ಶುಕ್ರವಾರ ಎಐಡಿಎಸ್ಒನಿಂದ ಪ್ರತಿಭಟನೆ ನಡೆಸಲಾಯಿತು.
ಬಹುತೇಕ ಬಡ ವಿದ್ಯಾರ್ಥಿಗಳು ಕಾಲೇಜಿಗಾಗಿ ಹಳ್ಳಿಗಳಿಂದ ಬರುತ್ತಾರೆ. ಹಾಗಾಗಿ ಶಾಲಾ ಕಾಲೇಜುಗಳಿಗೆ ಸುಗಮವಾಗಿ ಪ್ರಯಾಣಿಸಲು ಬಸ್ಪಾಸ್ ಅಗತ್ಯ. ಈಗಾಗಲೇ ಬಿಎಂಟಿಸಿಯ ಬಸ್ಪಾಸ್ ದರ ಏರಿಕೆಯಾಗಿದ್ದು, ಕೆಎಸ್ಆರ್ಟಿಸಿ ಕೂಡ ಬಸ್ಪಾಸ್ ದರ ಏರಿಕೆ ಮಾಡುವ ಸಾಧ್ಯತೆ ಇದೆ ಎನ್ನುವ ಮಾಹಿತಿ ಇದ್ದು, ಇಂತಹ ನಿರ್ಧಾರ ವಿದ್ಯಾರ್ಥಿಗಳ ವಿರೋಧಿ. ಬಸ್ಪಾಸ್ ದರ ಹೆಚ್ಚಳ ನಿರ್ಧಾರ ಕೈಬಿಡಬೇಕು ಎಂದು ಪ್ರತಿಭಟನಕಾರರು ಒತ್ತಾಯಿಸಿದರು.
ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿಗೆ ಮನವಿ ಸಲ್ಲಿಸಿದರು. ಎಐಡಿಎಸ್ಒ ನಗರ ಘಟಕ ಅಧ್ಯಕ್ಷೆ ಸೌಮ್ಯಾ,ನಗರ ಕಾರ್ಯದರ್ಶಿ ನಾಗಜ್ಯೋತಿ, ಕಾವ್ಯ, ಸ್ಮಿತಾ, ಪರಶುರಾಮ ಮತ್ತು ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.