ದಾವಣಗೆರೆ: ಮತದಾರರ ಆಶಯಗಳನ್ನು ನಿರ್ಲಕ್ಷಿಸುತ್ತಿರುವ ಮೂರು ಪಕ್ಷದ ಶಾಸಕರ ಕ್ರಮವನ್ನು ವಿರೋಧಿಸಿದ ರೈತರ ಸಂಘ ಮತ್ತು ಹಸಿರು ಸೇನೆಯ ಜಿಲ್ಲಾ ಸಮಿತಿಯು ಅತೃಪ್ತ ಶಾಸಕರು ಎಂದು ಹೇಳಿಕೊಂಡು ರೆಸಾರ್ಟ್ ಸೇರಿರುವ ಜನಪ್ರತಿನಿಧಿಗಳ ಫೋಟೊಗಳಿಗೆ ಕೆಎಸ್ಆರ್ಟಿಸಿ ಬಸ್ ನಿಲ್ದಾಣ ಬಳಿ ಸೋಮವಾರ ಚಪ್ಪಲಿ ಹಾರ ಹಾಕಿ, ಛೀ... ಥೂ.. ಎಂದು ಉಗುಳಿ ಪ್ರತಿಭಟನೆ ನಡೆಸಿದರು.
224 ಮಂದಿ ಶಾಸಕರಿಗೂ ಮಂತ್ರಿಯಾಗಬೇಕಿದ್ದರೆ ಕತ್ತೆ ಮಂತ್ರಿ, ನಾಯಿ ಮಂತ್ರಿ, ಹಂದಿ ಮಂತ್ರಿ, ಟೊಮೆಟೊ ಮಂತ್ರಿ, ಈರುಳ್ಳಿ ಮಂತ್ರಿ, ರಾಗಿ ಮಂತ್ರಿ, ಭತ್ತ ಮಂತ್ರಿ ಎಂದಾಗಲಿ. ರೈತರನ್ನು ನಿರ್ಲಕ್ಷಿಸುತ್ತಿರುವ ಇಂಥ ಶಾಸಕರನ್ನು ಮುಂದೆ ಆಯ್ಕೆ ಮಾಡಬಾರದು. ವಿಧಾನಸಭೆಯನ್ನು ವಿಸರ್ಜಿಸಿ ಕೂಡಲೇ ಚುನಾವಣೆಗೆ ಬರಬೇಕು. ಎಲ್ಲ ರೈತರು ಇವರಿಗೆ ಪಾಠ ಕಲಿಸಬೇಕು ಎಂದು ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲಶೆಟ್ಟಿ ಹಳ್ಳಿ ಚನ್ನಬಸಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಚಿಕ್ಕನಹಳ್ಳಿ ಮಲ್ಲೇಶಪ್ಪ, ಎಚ್. ಶಿವಪ್ಪ, ಎಚ್. ರಂಗಪ್ಪ, ಮಲ್ಲಶೆಟ್ಟಿಹಳ್ಳಿ ಹನುಮೇಶ, ಶತಕೋಟಿ ಬಸಪ್ಪ, ಎಚ್.ಜಿ. ಬಸವರಾಜಪ್ಪ, ಮಲ್ಲಶೆಟ್ಟಿಹಳ್ಳಿ ಅಜ್ಜಯ್ಯ, ಮಲ್ಲಶೆಟ್ಟಿಹಳ್ಳಿ ಮಂಜುನಾಥ, ವಿ.ಸಿ. ಗಣೇಶ್ ಅವರೂ ಇದ್ದರು.