ದಾವಣಗೆರೆ: ದಾವಣಗೆರೆ ಗ್ರಾಮಾಂತರ ಠಾಣೆ ಆವರಣದ ವಿಶ್ರಾಂತಿ ಕೊಠಡಿಯಲ್ಲಿ ಇಸ್ಪೀಟು ಆಡುತ್ತಿದ್ದ ವೇಳೆ ಐಜಿ ಸ್ಕ್ವಾಡ್ನ ತಂಡಕ್ಕೆ ಸಿಕ್ಕಿಬಿದ್ದ ಕಾನ್ಸ್ಟೆಬಲ್ಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಅವರು ಬುಧವಾರ ಅಮಾನತು ಮಾಡಿದ್ದಾರೆ.
ಅಲ್ಲದೇ ಠಾಣೆಯ ಪಿಎಸ್ಐ ಸಂಜೀವ್ ಕುಮಾರ್ ಅವರನ್ನು ಐಜಿಪಿ ಎಸ್.ರವಿ ಅಮಾನತು ಮಾಡಿದ್ದಾರೆ. ಠಾಣೆಯಲ್ಲಿಯೇ ಇಸ್ಟೀಟ್ ಆಟವಾಡುತ್ತಿದ್ದರೂ ಪಿಎಸ್ಐ ಗಮನಕ್ಕೆ ಏಕೆ ಬರಲಿಲ್ಲ ಎಂಬ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ.
ಸೋಮವಾರ ರಾತ್ರಿ ಇಸ್ಪೀಟ್ ಆಡುತ್ತಿದ್ದ ವೇಳೆ ಪೂರ್ವ ವಲಯ ಐಜಿಪಿ ಆದೇಶದಂತೆ ಡಿವೈಎಸ್ಪಿ ತಿರುಮಲೇಶ್, ಪೊಲೀಸ್ ಇನ್ಸ್ಪೆಕ್ಟರ್ ಶಂಕರ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ 5 ಮಂದಿಯನ್ನು ವಶಕ್ಕೆ ಪಡೆದಿದ್ದು, ₹29 ಸಾವಿರ ವಶಪಡಿಸಿಕೊಂಡಿದ್ದರು.
ಲಾಕ್ಡೌನ್ ವೇಳೆ ಜೂಜಾಟವಾಡುತ್ತಿದ್ದ ವೇಳೆ ಸಿಕ್ಕಿಬಿದ್ದ ಬಿಇಒ ಉತ್ತರ ವಲಯ ಕಚೇರಿ 6 ಸಿಬ್ಬಂದಿ ಹಾಗೂ ತಾಲ್ಲೂಕು ಪಂಚಾಯಿತಿ ಕಚೇರಿಯ ಪ್ರಥಮ ದರ್ಜೆ ಸಹಾಯಕ ಹಾಗೂ ಚಾಲಕರನ್ನು ಅಮಾನತುಗೊಳಿಸಲಾಗಿತ್ತು.