ರೈತರ ಅಹವಾಲು ಸ್ವೀಕರಿಸಿದ ಕಾಡಾ ಅಧ್ಯಕ್ಷೆ

ದಾವಣಗೆರೆ: ಕೊರೊನಾ ಸೋಂಕಿನಿಂದ ಎಲ್ಲರೂ ಮನೆಯಲ್ಲಿ ಕುಳಿತಿದ್ದರು. ರೈತರು ಮಾತ್ರ ವೈರಾಣುವಿಗೆ ಅಂಜದೆ ಕೆಲಸ ಮಾಡಿ ಜನರ ಮತ್ತು ದೇಶದ ಏಳಿಗೆಗಾಗಿ ಕೆಲಸ ಮಾಡಿದರು ಎಂದು ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಧ್ಯಕ್ಷೆ ಪವಿತ್ರ ರಾಮಯ್ಯ ಹೇಳಿದರು.
ತಾಲ್ಲೂಕಿನ ಅಣಬೇರು ಗ್ರಾಮದ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ರೈತರ ಅಹವಾಲು ಸ್ವೀಕರಿಸಿ ಮಾತನಾಡಿದರು.
ಎಷ್ಟು ಕೋಟಿ ರೂಪಾಯಿ ನೀಡಿದರೂ ನೀಗದಷ್ಟು ಬವಣೆ ರೈತರಲ್ಲಿದೆ. ಅವರನ್ನು ಸ್ವಾವಲಂಬಿಗಳಾಗಿ ಮಾಡಬೇಕು. ಜತೆಗೆ ಯೋಜನೆಯ ಫಲಾನುಭವಿಗಳಾಗಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ರೈತ ಶಿವಣ್ಣ ಮಾತನಾಡಿ, ‘ನಮ್ಮ ಭಾಗದಲ್ಲಿ ನಾಲೆ ಆಧುನೀಕರಣ ಆದ ದಿನದಿಂದ ನಾಲೆಯಲ್ಲಿ ತುಂಬಿರುವ ಹೂಳು ಮತ್ತು ಜಂಗಲ್ ಸ್ವಚ್ಛಗೊಳಿಸಿಲ್ಲ. ಜಾಲಿ ಗಿಡಗಳು ಬೆಳೆದು ನೀರು ಹರಿಯಲು ಇದು ತೊಡಕಾಗಿದೆ. ಈ ಸಂಬಂಧ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಸಮಸ್ಯೆ ಬಗೆಹರಿಸಲು ನಿರ್ದೇಶನ ನೀಡಬೇಕು. ಈ ಭಾಗದಲ್ಲಿ ಭದ್ರಾ ಕಾಡಾದಿಂದ ಅಚ್ಚುಕಟ್ಟು ರಸ್ತೆಗಳು, ಹೊಲಗಾಲುವೆ ಅಭಿವೃದ್ಧಿ ಆಗಬೇಕು. ಅದಕ್ಕೆ ಅನುದಾನ ಒದಗಿಸಬೇಕು’ ಎಂದು ಕೋರಿದರು.
ನರೇಗಾ ಯೋಜನೆಯಲ್ಲಿ ನೂರಾರು ಕೋಟಿ ಅನುದಾನ ಬಿಡುಗಡೆಯಾಗಿದ್ದು ಅದನ್ನು ಬಳಸಿಕೊಂಡು ನಾಲೆಗಳನ್ನು ಸ್ವಚ್ಛ ಮಾಡಿಸಿ. ಕಾರ್ಮಿಕರು ಸಿಗದೇ ಇದ್ದರೆ ಡಂಗೂರ ಸಾರಿಸಿ. ಆಗ ಕೆಲಸಕ್ಕೆ ಬರುತ್ತಾರೆ ಎಂದು ಅಧ್ಯಕ್ಷರು ಪಿಡಿಒಗೆ ಸೂಚಿಸಿದರು.
ಕಾಡಾ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ನಾರಾಯಣ ಸ್ವಾಮಿ, ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಚಂದ್ರಶೇಖರ್ ಹಾಗೂ ಗ್ರಾಮಸ್ಥರು ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.