ದಾವಣಗೆರೆ: ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮ ಯಶಸ್ವಿಯಾಗಿದ್ದು, ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಮೇಯರ್ ಬಿ.ಜಿ. ಅಜಯ್ ಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ವಾರದ ಹಿಂದೆ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಕರೆ ಮಾಡಿ ನಮ್ಮ ಕಾರ್ಯವನ್ನು ಶ್ಲಾಘಿಸಿದರು. ಪ್ರಧಾನಮಂತ್ರಿ ನಾಳೆ ನಿಮಗೆ ಕರೆ ಮಾಡಲಿದ್ದಾರೆ ಎಂದ ತಿಳಿಸಿದರು. ಎರಡು ದಿನಗಳ ಬಳಿಕ ಪ್ರಧಾನಿ ಅವರು ಕರೆ ಮಾಡಿ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಶ್ಲಾಘಿಸಿದರು’ ಎಂದು ತಿಳಿಸಿದರು.
1950ರಲ್ಲಿ ಮೃತಪಟ್ಟಿದ್ದ ಭಾರತ್ ಕಾಲೊನಿಯ ಸಿದ್ಧವೀರಪ್ಪ ತಂದೆ ವಿರಾಟಪ್ಪ ಎನ್ನುವವರ ಮರಣ ಪ್ರಮಾಣಪತ್ರವನ್ನು ನೀಡುವ ಮೂಲಕ ಈ ಕಾರ್ಯಕ್ರಮ ದಾಖಲೆ ನಿರ್ಮಿಸಿದೆ. ಈಗಾಗಲೇ 41 ವಾರ್ಡ್ಗಳಲ್ಲಿ ಈ ಕಾರ್ಯಕ್ರಮ ಮುಗಿದಿದೆ. 17 ಮತ್ತು 24ನೇ ವಾರ್ಡ್ನ ಕಾರ್ಯಕ್ರಮ ಫೆ.20ರಂದು ನಡೆಯಲಿದ್ದು, ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ. 32ನೇ ವಾರ್ಡ್ನ ಉಮಾ ಪ್ರಕಾಶ್ ಮತ್ತು 35ನೇ ವಾರ್ಡ್ ಸದಸ್ಯೆ ಸವಿತಾ ಗಣೇಶ್ ಅವರು ಕಾರ್ಯಕ್ರಮ ನಡೆಸಲು ಉತ್ಸುಕರಾಗದೇ ಇರುವುದರಿಂದ ಆ ಎರಡು ಕಡೆ ಮನೆ ಬಾಗಿಲಿಗೆ ಮಹಾನಗರ ಪಾಲಿಕೆ ಕಾರ್ಯಕ್ರಮ ನಡೆದಿಲ್ಲ ಎಂದು ವಿವರಿಸಿದರು.
ಈ ಕಾರ್ಯಕ್ರಮ ನಡೆಸಲು ಸುಮಾರು ₹ 9 ಲಕ್ಷ ವೆಚ್ಚವಾಗಿದೆ. ಆಸ್ತಿ ತೆರಿಗೆ ಮತ್ತು ನೀರಿನ ದರದಿಂದ ₹ 1.45 ಕೋಟಿ ಸಂಗ್ರಹವಾಗಿದೆ. 344 ಉದ್ದಿಮೆಗಳಿಗೆ ಪರವಾನಗಿ ನೀಡಲಾಗಿದ್ದು, ₹ 4.59 ಲಕ್ಷ ಸಂಗ್ರಹವಾಗಿದೆ. 490 ಜನನ–ಮರಣ ಪ್ರಮಾಣಪತ್ರ ಸ್ಥಳದಲ್ಲೇ ವಿತರಣೆ ಮಾಡಲಾಗಿದೆ. 21 ಕಟ್ಟಡ ಪರವಾನಗಿ ನೀಡಲಾಗಿದೆ. 344 ಟ್ರೇಡ್ ಲೈಸನ್ಸ್ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಎಂಜಿನಿಯರಿಂಗ್ ಶಾಖೆಗೆ 206, ಆಶ್ರಯ ಶಾಖೆಗೆ 95, ಆರೋಗ್ಯ ಶಾಖೆಗೆ 38, ವಿದ್ಯುತ್ ಶಾಖೆಗೆ 286, ಕಂದಾಯ ಶಾಖೆಗೆ 17 ದೂರು ಗಳು ಬಂದಿದ್ದವು. ಶೇ 60ರಷ್ಟು ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ ಎಂದರು.