ದಾವಣಗೆರೆ: ನಗರದ ಜಿಎಂ ತಾಂತ್ರಿಕ ಕಾಲೇಜಿನಲ್ಲಿ ಶುಕ್ರವಾರ ಪ್ರಾಜೆಕ್ಟ್ ಪ್ರದರ್ಶನ ಆಯೋಜಿಸಲಾಗಿತ್ತು. ವಿವಿಧ ವಿಭಾಗಗಳ ವಿದ್ಯಾರ್ಥಿಗಳ 30ಕ್ಕೂ ಅಧಿಕ ಪ್ರಾಜೆಕ್ಟ್ಗಳು ಪ್ರದರ್ಶನಗೊಂಡಿದ್ದವು.
ಸಕ್ಕರೆ ಕಾರ್ಖಾನೆ ತ್ಯಾಜ್ಯ ಬಳಸಿಕೊಂಡು ಬಯೋಎಥೆನಾಲ್, ಗೊಬ್ಬರ ತಯಾರಿಕೆ, ಪರಿಸರ ಸ್ನೇಹಿ ಊಟದ ತಟ್ಟೆ ತಯಾರಿಕೆ, ಮೆಕಾನಿಕಲ್ ವಿಭಾಗದ ವಿದ್ಯಾರ್ಥಿಗಳು ಸೌರವಿದ್ಯುತ್ ಚಾಲಿತ ಕಾರ್ ಮಾದರಿಗಳು ಗಮನ ಸೆಳೆದವು.
ಮಾಹಿತಿ ವಿಜ್ಞಾನ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿ ಮಾನವರಹಿತ ರೋಬೋಟ್ ಗಮನ ಸೆಳೆಯಿತು. ಇದು ನೈಸರ್ಗಿಕ ವಿಪತ್ತು, ಮಾನವ ನಿಷೇಧಿತ ಸ್ಥಳಗಳಲ್ಲಿ ಪ್ರಾಣಹಾನಿ ತಡೆಯಲು ಸಹಕಾರಿ. ವಿಆರ್ ಹೆಡ್ಸೆಟ್ ರಿಮೋಟ್ನಿಂದ ಕಾರ್ಯನಿರ್ವಹಿಸುತ್ತದೆ.
ಬಯೋಟೆಕ್ನಾಲಜಿ ವಿದ್ಯಾರ್ಥಿಗಳು ಸಿದ್ಧಪಡಿಸಿದ ಚರಂಡಿ ನೀರಿನಿಂದ ವಿದ್ಯುತ್, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳ ಗಾಳಿಯಿಂದ ನೀರು ಉತ್ಪಾದಿಸುವ ಮಾದರಿ ಕಾರ್ಯನಿರ್ವಹಣೆ ಬಗ್ಗೆ ವಿವರಿಸಿದರು.
‘ಚರಂಡಿ ನೀರಿನಿಂದ ವಿದ್ಯುತ್, ಶುದ್ಧ ನೀರು ಮತ್ತು ಸಕ್ಕರೆ ಕಾರ್ಖಾನೆ ತ್ಯಾಜ್ಯಗಳಿಂದ ಗೊಬ್ಬರ ತಯಾರಿಕೆ ಮಾದರಿಗಳಿಗೆ ರಾಜ್ಯ ವಿಜ್ಞಾನ ಅಕಾಡೆಮಿಯಿಂದ ಉತ್ತಮ ಪ್ರಾಜೆಕ್ಟ್ಗಳೆಂದು ಗುರುತಿಸಿಕೊಂಡಿವೆ’ ಎಂದು ಬಯೋಟೆಕ್ ವಿಭಾಗದ ಮುಖ್ಯಸ್ಥ ಡಾ. ಗುರುಮೂರ್ತಿ ತಿಳಿಸಿದರು.