ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಹಂದಿಗೆ ರಕ್ಷಣೆ, ಮಂದಿಗೆ ಯಾತನೆ

Last Updated 9 ಜೂನ್ 2019, 18:30 IST
ಅಕ್ಷರ ಗಾತ್ರ

ದಾವಣಗೆರೆ: ‘ಹಂದಿಗಳ ರಕ್ಷಣೆಗೆ ಕಾನೂನು ಇದೆ. ಹಂದಿಗಳಿಂದ ಮನುಷ್ಯರಿಗೆ ರಕ್ಷಣೆ ಮಾತ್ರ ಇಲ್ಲ...’ –ಶುಕ್ರವಾರ ಬಾಲಕನ ಮೇಲೆ ಹಂದಿಗಳು ದಾಳಿ ಮಾಡಿದ ಸುದ್ದಿಯನ್ನು ಕೇಳಿ ಪ್ರದೀಪ್‌ ಎಂಬವರು ಉದ್ಗರಿಸಿದ್ದು ಹೀಗೆ.

ಇದು ಅವರೊಬ್ಬರ ಮಾತಲ್ಲ. ಹಂದಿಗಳಿಂದ ತೊಂದರೆಗೆ ಒಳಗಾಗುತ್ತಿರುವ ಪ್ರತಿಯೊಬ್ಬರ ಮಾತಾಗಿದೆ.

ಬೆಣ್ಣೆದೋಸೆ ನಗರಿ, ವಿದ್ಯಾನಗರಿ, ಮಂಡಕ್ಕಿ ನಗರಿ ಎಂಬೆಲ್ಲ ಹೆಗ್ಗಳಿಕೆಯ ಜತೆಜತೆಗೆ ಹಂದಿ ನಗರಿ ಎಂಬ ಅಪಖ್ಯಾತಿಯನ್ನೂ ಹೊಂದಿರುವ ದಾವಣಗೆರೆಯಿಂದಾಗಿ ರಾಜ್ಯದ ಯಾವ ನಗರ ಸ್ಥಳೀಯಾಡಳಿತಗಳೂ ಹಂದಿ ಹಿಡಿಯದಂತಾಗಿದೆ.

ಏನಿದು ಆದೇಶ: ‘ಆಪರೇಷನ್‌ ವರಾಹ’ ಕಾರ್ಯಾಚರಣೆ ನಡೆಸಿ ತಮಿಳುನಾಡಿಗೆ ಹಂದಿ ಸಾಗಿಸುತ್ತಿದ್ದ ದಾವಣಗೆರೆ ಮಹಾನಗರ ಪಾಲಿಕೆಯ ಕ್ರಮದ ವಿರುದ್ಧ ಹಂದಿ ಮಾಲೀಕರ ಪರವಾಗಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘವು ಹೈಕೋರ್ಟ್‌ ಮೆಟ್ಟಿಲೇರಿತ್ತು. ಹಂದಿಗಳನ್ನು ಹೊರ ರಾಜ್ಯಕ್ಕೆ ಸಾಗಿಸಬಾರದು. ಹಂದಿ ಸಾಕುವವರನ್ನು ಆರ್ಥಿಕವಾಗಿ ಸಬಲಗೊಳಿಸಲು ಕಾರ್ಯಕ್ರಮ ಹಾಕಿಕೊಳ್ಳಬೇಕು. ನಗರದ ಹೊರಗೆ ಹಂದಿಗಳಿಗೆ ಆಶ್ರಯ ಕಲ್ಪಿಸಬೇಕು ಎಂದು ಹೈಕೋರ್ಟ್‌ ವಿಭಾಗೀಯ ಪೀಠ ಆದೇಶ ನೀಡಿತ್ತು.

ನಗರದ ಹೊರಗೆ ಅಶ್ರಯ ಕಲ್ಪಿಸಲು ಅಲ್ಲಿನ ಜನ ಬಿಡುತ್ತಿಲ್ಲ. ಬೇರೆ ಕಡೆ ಸಾಗಿಸುವಂತಿಲ್ಲ. ಜನ ಎಚ್ಚೆತ್ತುಕೊಂಡು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಹೋರಾಟ ಮಾಡಿದರಷ್ಟೇ ಹಂದಿಗಳ ನಿಯಂತ್ರಣಕ್ಕೆ ಆದೇಶ ಬರಬಹುದು ಎನ್ನುತ್ತಾರೆ ಪಾಲಿಕೆ ಆಯುಕ್ತ ವೀರೇಂದ್ರ ಕುಂದಗೋಳ.

ಹಂದಿ ಮಾಲೀಕರು ಅವುಗಳನ್ನು ರಸ್ತೆ ಬಿಡದೇ ಅವರೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುತ್ತಾರೆ ಅವರು.

‘ನಿಫಾ’ ಕಟ್ಟೆಚ್ಚರ: ಕೇರಳದಲ್ಲಿ ನಿಫಾ ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಕಟ್ಟೆಚ್ಚರದಲ್ಲಿ ಇರುವಂತೆ ರಾಜ್ಯ ಸರ್ಕಾರ ತಿಳಿಸಿದೆ. ಜನರು ಜಾಗೃತರಾಗಿರಬೇಕು. ಹಂದಿಗಳ ಸಂಖ್ಯೆ ದಾವಣಗೆರೆಯಲ್ಲಿ ಹೆಚ್ಚಿರುವುದರಿಂದ ಇಲ್ಲಿ ಇನ್ನೂ ಹೆಚ್ಚು ಎಚ್ಚರದಿಂದ ಇರಬೇಕು ಎನ್ನುತ್ತಾರೆ ಪಶುಸಂಗೋಪನಾ ಇಲಾಖೆಯ ಡಾ. ಚಂದ್ರಶೇಖರ ಸುಂಕದ.

ವರ್ಷ ಎರಡು: ದಾಳಿ ಹಲವು

ಎರಡು ವರ್ಷಗಳ ಹಿಂದೆ ಶೇಖರಪ್ಪ ನಗರದಲ್ಲಿ ಕೃತಿಕಾ ಮತ್ತು ಒವಿಯಾ ಎಂಬ ಪುಟ್ಟ ಮಕ್ಕಳಿಗೆ ಹಂದಿ ಕಚ್ಚಿ ಗಾಯ ಮಾಡಿತ್ತು. ಇದಾಗಿ ಆರು ತಿಂಗಳ ಬಳಿಕ ಹೊಸ ಕುಂದವಾಡದಲ್ಲಿ ಕೌಶಿಕ್‌ ಎಂಬ ಮೂರು ವರ್ಷದ ಬಾಲಕನ ಮೇಲೆ ಹಂದಿ ದಾಳಿ ಮಾಡಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಪಾಲಿಕೆಯ ನೌಕರ ಕೆ.ಎಚ್‌. ಮಂಜುನಾಥ ಜಾಲಿನಗರದಲ್ಲಿ ನೀರು ಸರಬರಾಜಿಗಾಗಿ ವಾಲ್ವ್‌ ತಿರುಗಿಸಲು ಹೋದಾಗ ಹಂದಿ ದಾಳಿ ಮಾಡಿ ತೊಡೆ ಹಾಗೂ ಮರ್ಮಾಂಗಕ್ಕೆ ಕಚ್ಚಿತ್ತು. ಈ ವರ್ಷ ಮಾರ್ಚ್‌ನಲ್ಲಿ ಬೇತೂರಿನಲ್ಲಿ ಸುಜನ್‌ ಎಂಬ ಎರಡು ವರ್ಷದ ಮಗುವನ್ನು ಹಂದಿಗಳು ಕಚ್ಚಿ ಚರಂಡಿಗೆ ಎಳೆದಿದ್ದವು. ಶುಕ್ರವಾರ ಶಿವಕುಮಾರಸ್ವಾಮಿ ಬಡಾವಣೆಯಲ್ಲಿ ವೇದಾಂತ್‌ ಎ. ಗೌಡ ಎಂಬ 10 ವರ್ಷದ ಬಾಲಕನ್ನು ಹಂದಿಗಳು ಎಳೆದಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT