ದಾವಣಗೆರೆ: ಸಂವಿಧಾನ ಹಾಗೂ ಡಾ.ಬಿ.ಆರ್. ಅಂಬೇಡ್ಕರ್ ಅವರಿಗೆ ಶಿಕ್ಷಣ ಇಲಾಖೆ ಹಾಗೂ ಸಚಿವರು ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದಿ) ಜಿಲ್ಲಾ ಘಟಕದಿಂದ ಅಂಬೇಡ್ಕರ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಯಿತು.
‘ನ.26ರಂದು ಶಾಲಾ–ಕಾಲೇಜುಗಳಲ್ಲಿ ಸಂವಿಧಾನ ಜಾಗೃತ ಕಾರ್ಯಕ್ರಮವನ್ನು ಆರಂಭಿಸಬೇಕು ಎಂದು ಶಿಕ್ಷಣ ಇಲಾಖೆ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚನೆ ಮಾಡಿಲ್ಲ. ಎಲ್ಲಾ ಸಮಿತಿಗಳು ಸೇರಿಕೊಂಡು ರಚನೆ ಮಾಡಿದ್ದಾರೆ ಎಂದು ಈ ಸುತ್ತೋಲೆಯಲ್ಲಿ ತಿಳಿಸಲಾಗಿದೆ’ ಎಂದು ಪ್ರತಿಭಟನಕಾರರು ಆರೋಪಿಸಿದರು.
ಸುತ್ತೋಲೆ ಹೊರಡಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅವರು ನೇರ ಹೊಣೆಗಾರರಾಗಿದ್ದು, ಅವರನ್ನು ಅಮಾನತುಗೊಳಿಸಬೇಕು. ಕೈಪಿಡಿ ಸಿದ್ಧಪಡಿಸಿರುವ ಸಿ.ಎಂ.ಸಿ.ಎ. ಸಂಸ್ಥೆಯ ಮಾನ್ಯತೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದರು.
ಸಮಿತಿಯ ರಾಜ್ಯ ಸಂಚಾಲಕರಾದ ಎಚ್.ಮಲ್ಲೇಶ್, ಎಸ್.ಜಿ.ವೆಂಕಟೇಶಬಾಬು, ತಾಲ್ಲೂಕು ಸಂಚಾಲಕ ಸಂಚಾಲಕ ಎಚ್.ಸಿ. ಮಲ್ಲಪ್ಪ, ಜಿಲ್ಲಾ ಸಂಚಾಲಕ ಜಿ.ಎನ್.ಮಲ್ಲಿಕಾರ್ಜುನ್, ಅಣ್ಣಪ್ಪ ತಣಿಗೆರೆ, ಅನಿಲ್ ಕೇಸರಿ, ಜಿ.ಎಸ್.ಲೋಕೇಶ್ ಹಾಲೇಕಲ್ಲು, ಅಂಜಿನಪ್ಪ ನೀಲಗುಂದ ಹಾಜರಿದ್ದರು.