ದಾವಣಗೆರೆ: ನಗರದಲ್ಲಿರುವ ಅಂಗಡಿ, ಮಳಿಗೆಗಳ ನಾಮಫಲಕಗಳು ಕನ್ನಡದಲ್ಲೇ ಇರಬೇಕು. ನಿಯಮ ಪಾಲಿಸದ ಅಂಗಡಿಗಳ ವಿರುದ್ಧ ಪಾಲಿಕೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಗುರುವಾರ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ)ಯಿಂದ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.
‘ಬೇರೆ ಭಾಷೆಯ ನಾಮಫಲಕಗಳಿಗೆ ಮಸಿ ಬಳಿದು, ಕ್ರಮ ಕೈಗೊಳ್ಳುವಂತೆ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಕರ್ನಾಟಕದಲ್ಲಿ ಹುಟ್ಟಿ ಕನ್ನಡಿಗರಾಗಿ ಬೆಳೆದು ಕನ್ನಡ ಭಾಷೆಯನ್ನು ಬಳಸುವುದಕ್ಕೆ ಹಿಂಜರಿಯುವ ಭಾಷಾ ನಿರಭಿಮಾನಿಗಳು ನಮ್ಮಲ್ಲಿ ಇದ್ದಾರೆ. ಅಂಥವರಿಗೆ ಮಹಾನಗರ ಪಾಲಿಕೆಯ ಕೆಲವು ಅಧಿಕಾರಿಗಳು ಪ್ರೋತ್ಸಾಹ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಆದೇಶವಿದ್ದರೂ ಅಂಗಡಿಗಳ ಎದುರು ಬೇರ ಭಾಷೆಯ ನಾಮಫಲಕ ಅಳವಡಿಸಿರುವುದು ಖಂಡನೀಯ’ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಜಾಹೀರಾತು, ನಾಮಫಲಕಗಳು ಕನ್ನಡದಲ್ಲಿ ಇಲ್ಲದಿದ್ದರೆ ಸಂಬಂಧಿಸಿದವರಿಗೆ ದಂಡ ಹಾಕಬೇಕು ಎಂಬ ಆದೇಶ ಇದೆ. ಆದರೆ ಅಂಗಡಿಯ ಮಾಲೀಕರು ಮತ್ತು ಜಾಹೀರಾತುದಾರರರೊಂದಿಗೆ ಅಧಿಕಾರಿಗಳು ಶಾಮೀಲಾಗಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದರು.
ಪಾಲಿಕೆ ಆಯುಕ್ತರು ಕೂಡಲೇ ಅಂಗಡಿ ಮಾಲೀಕರು, ಫ್ಲೆಕ್ಸ್ ಪ್ರಿಂಟರ್ಸ್ ಮತ್ತು ಡಿಸೈನರ್ ಹಾಗೂ ಫ್ಲೆಕ್ಸ್ ಅಳವಡಿಸುವವರ ಸಭೆ ಕರೆಯಬೇಕು. ನಿಯಮ ಉಲ್ಲಂಘಿಸುವವರಿಗೆ ದಂಡ ಹಾಕಬೇಕು. ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಬಳಿಕ ಮೇಯರ್, ಪಾಲಿಕೆ ಆಯುಕ್ತರು ಹಾಗೂ ಪಾಲಿಕೆ ವಿರೋಧ ಪಕ್ಷದ ನಾಯಕ ಪ್ರಸನ್ನಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು.
ವೇದಿಕೆ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ರಾಮೇಗೌಡ, ಕಾರ್ಯಕರ್ತರಾದ ಜಬಿವುಲ್ಲಾ, ಲೋಕೇಶ್, ಜಿ.ಎಸ್. ಸಂತೋಷ್ , ತಮನ್ನಾ ರಫೀಕ್, ದಾದಾಪೀರ್, ಪ್ರಕಾಶ್, ರವಿ, ಅಕ್ಷಯ್, ಹರೀಶ್, ಧೀರೇಂದ್ರ, ಸಾಕಮ್ಮ, ಈಶ್ವರ್, ಆಯೂಬ್, ನಾಗರಾಜ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.