ದಾವಣಗೆರೆ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಧೋರಣೆಯಿಂದಾಗಿ ದಾವಣಗೆರೆಯ ಯುಬಿಡಿಟಿ ಎಂಜಿನಿಯರಿಂಗ್ ಕಾಲೇಜಿನ ಆಡಳಿತ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಆರೋಪಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಇಲ್ಲಿನ ಗುಂಡಿ ವೃತ್ತದಲ್ಲಿ ಜಮಾಯಿಸಿದ ನೂರಾರು ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಅಲ್ಲಿಂದಯುಬಿಡಿಟಿ ಕಾಲೇಜಿಗೆ ತೆರಳಿ ಕಾಲೇಜಿನ ಗೇಟ್ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.
ಯುಬಿಡಿಟಿ ಕಾಲೇಜಿನಲ್ಲಿ ಅವೈಜ್ಞಾನಿಕ ಶುಲ್ಕ ವಿಧಿಸಲಾಗಿದೆ. 2ನೇ ಹಾಗೂ 3ನೇ ವರ್ಷದ (ಡಿಪ್ಲೊಮಾದಿಂದ ಲ್ಯಾಟರಲ್ ಪ್ರವೇಶ) ವಿದ್ಯಾರ್ಥಿಗಳಿಗೆ ವೈದ್ಯಕೀಯ ಶುಲ್ಕ ₹ 300 ವಿಧಿಸಿದ್ದು, ಸಾಮಾನ್ಯ ವಿದ್ಯಾರ್ಥಿಗಳಿಗೆ ₹ 95 ಇದ್ದು, ತಾರತಮ್ಯ ಎಸಗಲಾಗಿದೆ. ಅಲ್ಲದೇ ಪಠ್ಯೇತರ ಚಟುವಟಿಕೆ ಶುಲ್ಕ ₹ 3000 ಇದೆ. 3 ಮತ್ತು 4ನೇ ವರ್ಷದ ವಿದ್ಯಾರ್ಥಿಗಳಿಗೆ ₹ 200 ಇದೆ. ಕಾಲೇಜಿನಲ್ಲಿ ಅಂತರ್ಜಾಲ ಸೌಲಭ್ಯ ಇಲ್ಲ. ಕ್ರೀಡಾ ಸಾಮಗ್ರಿಗಳಿಲ್ಲ. ಉಚಿತ ಲ್ಯಾಪ್ಟಾಪ್ ಮತ್ತು ಟ್ಯಾಬ್ಗೆ ಅರ್ಜಿ ಸಲ್ಲಿಸಲು ಅವಕಾಶ ಇಲ್ಲ. ಬೇಕಾಬಿಟ್ಟಿ ಹಾಸ್ಟೆಲ್ ಶುಲ್ಕ ನಿಗದಿ ಪಡಿಸಲಾಗಿದೆ ಎಂದು ಆರೋಪಿಸಿದರು.
70 ವರ್ಷಗಳ ಇತಿಹಾಸ ಇರುವ ಕಾಲೇಜನ್ನು ಕಡೆಗಣಿಸುತ್ತಿದ್ದು, ಕಾಲೇಜನ್ನು ಮುಚ್ಚುವ ಹುನ್ನಾರ ನಡೆಸಲಾಗಿದೆ. ಕಾಲೇಜನ್ನು ವಿಟಿಯುವಿನಿಂದ ಪ್ರತ್ಯೇಕಿಸಬೇಕು ಎಂದು ಆಗ್ರಹಿಸಿದರು.
ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಕಾಲೇಜಿನ ಗೇಟ್ ಬಂದ್ ಮಾಡಿ ಆವರಣದಲ್ಲೇ ಅನಿರ್ದಿಷ್ಟಾವಧಿ ಧರಣ ನಡೆಸುವುದಾಗಿ ಎಚ್ಚರಿಸಿದರು. ಕಾಲೇಜಿನ ಪ್ರಭಾರ ಪ್ರಾಚಾರ್ಯರಿಗೆ ಮನವಿ ಸಲ್ಲಿಸಿದರು.
ಎಬಿವಿಪಿಯ ಮಂಜುನಾಥ ಕೊಳ್ಳೇರ, ಕೊಟ್ರೇಶ, ಸೋಹನ್, ಮೋಹಿತ್, ಅಲೋಕ, ದರ್ಶನ್, ಗುರು, ಹರೀಶ, ಅನಿಕೇತ, ಅಕ್ಷತಾ, ವಿಜಯ ಇದ್ದರು.