ದಾವಣಗೆರೆ: ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಅನುದಾನ ರಹಿತ ಖಾಸಗಿ ಶಾಲಾ ಮಕ್ಕಳಿಗೂ ಉಚಿತ ಪಠ್ಯಪುಸ್ತಕ ವಿತರಣೆ ಮಾಡಬೇಕು ಎಂದು ದಾವಣಗೆರೆ ಜಿಲ್ಲಾ ಶಾಶ್ವತ ಅನುದಾನ ರಹಿತ ಶಾಲಾ ಆಡಳಿತ ಮಂಡಳಿಗಳ ಸಂಘದ ಅಧ್ಯಕ್ಷ ತ್ಯಾವಣಿಗೆ ವೀರಭದ್ರಸ್ವಾಮಿ ಒತ್ತಾಯಿಸಿದರು.
ಕೋವಿಡ್ನಿಂದ ಶಾಲೆಗಳು ಆರಂಭವಾಗದ ಕಾರಣ ಖಾಸಗಿ ಶಾಲಾ ಆಡಳಿತ ಮಂಡಳಿ ಸಂಕಷ್ಟದಲ್ಲಿವೆ. ಪೋಷಕರೂ ಆರ್ಥಿಕ ನಷ್ಟದಲ್ಲಿದ್ದಾರೆ. ಹೀಗಾಗಿ ಸರ್ಕಾರ ಖಾಸಗಿ ಶಾಲೆ ಮಕ್ಕಳಿಗೂ ಉಚಿತ ಪಠ್ಯಪುಸ್ತಕ ಒದಗಿಸಿ ಅನುಕೂಲ ಕಲ್ಪಿಸಬೇಕು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.
ಆಗಸ್ಟ್ 15ರಿಂದ ಶಾಲೆ ಆರಂಭಿಸುವ ಸಂಬಂಧ ಸರ್ಕಾರ ಜುಲೈ 1ರಿಂದ ಸಿದ್ಧತೆ ಮಾಡಿಕೊಳ್ಳಲು ಸೂಚಿಸಿದೆ. ಹೀಗಾಗಿ ಜಿಲ್ಲೆಯ ಎಲ್ಲ ಖಾಸಗಿ ಶಾಲೆಗಳು ಯಾವುದೇ ಭಯವಿಲ್ಲದೆ ಸುರಕ್ಷತೆಯ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಬೆಂಗಳೂರು ಸೇರಿ ಕೆಲವೆಡೆಯ ಶಾಲೆಗಳು ಹೆಚ್ಚು ಡೊನೇಷನ್ ತೆಗೆದುಕೊಳ್ಳುವುದನ್ನು ಮುಂದಿಟ್ಟುಕೊಂಡು ರಾಜ್ಯದ ಎಲ್ಲ ಖಾಸಗಿ ಶಾಲೆಗಳ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಮನವಿ ಮಾಡಿದರು.
ಸಂಘದ ಉಪಾಧ್ಯಕ್ಷ ಎಸ್.ನಿಂಗಪ್ಪ, ಕಂದನಕೋವಿ ಪ್ರಕಾಶ್, ನಸ್ರುಲ್ಲಾ ಖಾನ್, ಬಾತಿ ನಾಗರಾಜ್, ಚೇತನ್ಕುಮಾರ್, ದಿನೇಶ್, ಅಬ್ದುಲ್ ಇದ್ದರು.