ದಾವಣಗೆರೆ: ‘ರೈಲ್ವೆ ಪೊಲೀಸರು ಸದಾ ನಿಮ್ಮ ಸೇವೆಯಲ್ಲಿ’ ಎಂಬ ಪ್ರಯಾಣಿಕರ ಸ್ನೇಹಿ ಯೋಜನೆ ದಾವಣಗೆರೆ ರೈಲು ನಿಲ್ದಾಣದಲ್ಲಿ ಆರಂಭಗೊಂಡಿದೆ. ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತೊಂದರೆಯಾದರೆ ಅಥವಾ ಅಸುರಕ್ಷಿತ ವಾತಾವರಣ ನಿರ್ಮಾಣವಾದರೆ ಕೂಡಲೇ ಸಹಾಯಕ್ಕೆ ಪೊಲೀಸರು ಬರಲಿದ್ದಾರೆ.
ರೈಲ್ವೆ ಎಡಿಜಿಪಿ ಭಾಸ್ಕರ್ ರಾವ್ ಅವರ ಆದೇಶದ ಮೇರೆಗೆ ರೈಲ್ವೆ ಪೊಲೀಸ್ ವರಿಷ್ಠಾಧಿಕಾರಿ ಸಿರಿಗೌರಿ, ಹಾಗೂ ರೈಲ್ವೆ ಪೋಲಿಸ್ ಉಪ ವರಿಷ್ಠಾಧಿಕಾರಿ ಡಿ.ಆಶೋಕ ಮಾರ್ಗದರ್ಶನದಲ್ಲಿ ದಾವಣಗೆರೆ ರೈಲ್ವೆ ಪೊಲೀಸ್ ಠಾಣೆಯ ಮುಸ್ತಾಕ್ ಅಹಮ್ಮದ್ ಡಿ. ಶೇಖ್ ಮತ್ತು ಠಾಣಾ ಸಿಬ್ಬಂದಿ ಗುರುವಾರ ವಿಸಿಟಿಂಗ್ ಕಾರ್ಡ್ಳನ್ನು ರೈಲು ಪ್ರಯಾಣಿಕರಿಗೆ ನೀಡಿದರು. ‘ಪ್ರಯಾಣಿಕರ ಸುರಕ್ಷತೆ ನಮ್ಮ ಹೊಣೆ’ ಎಂಬ ಸಂದೇಶವನ್ನು ಸಾರಿದರು.
ದಾವಣಗೆರೆಯಿಂದ ವಿವಿಧ ಕಡೆಗಳಿಗೆ ನಿತ್ಯ ಸುಮಾರು 9000 ಮಂದಿ ರೈಲು ಮೂಲಕ ಪ್ರಯಾಣ ಬೆಳೆಸುತ್ತಾರೆ. ರೈಲು ನಿಲ್ದಾಣದಲ್ಲಿ ಕಾಯುವವರು ಮತ್ತು ರೈಲುಗಾಡಿಯಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮುದ್ರಿತವಾದ ವಿಸಿಟಿಂಗ್ ಕಾರ್ಡ್ ನೀಡಲಾಗುತ್ತದೆ. ಪ್ರಯಾಣದ ವೇಳೆ ಏನಾದರೂ ಸಮಸ್ಯೆ ಉಂಟಾದರೆ ವಿಸಿಟಿಂಗ್ ಕಾರ್ಡುಗಳಲ್ಲಿ ಇರುವ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು. 15 ನಿಮಿಷಗಳ ಒಳಗೆ ಪೊಲೀಸ್ ಸಿಬ್ಬಂದಿ ನೆರವಿಗೆ ಬರಲಿದ್ದಾರೆ ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.