ದಾವಣಗೆರೆ: ಶ್ರೀಸಾಮಾನ್ಯನ ಕೈಯಲ್ಲಿ ಮೊಬೈಲ್ ಬರಲು ರಾಜೀವ್ ಗಾಂಧಿ ಕಾರಣ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಸ್ಮರಿಸಿದರು.
ಜಿಲ್ಲಾ ಕಾಂಗ್ರೆಸ್ ಇಂಟಕ್ ವಿಭಾಗದಿಂದ ಏರ್ಪಡಲಾಗಿದ್ದ ದಿವಂಗತ ರಾಜೀವ್ ಗಾಂಧಿ ಅವರ 32ನೇ ಪುಣ್ಯತಿಥಿ ಕಾರ್ಯಕ್ರಮದಲ್ಲಿ ರಾಜೀವ್ ಗಾಂಧಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ರಾಜೀವ್ ಗಾಂಧಿ ಅತಿ ಕಿರಿಯ ವಯಸ್ಸಿನಲ್ಲಿ ಪ್ರಧಾನ ಮಂತ್ರಿಯಾಗಿ ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡಿದರು. 18 ವರ್ಷ ತುಂಬಿದವರಿಗೆ ಮತದಾನದ ಹಕ್ಕು ನೀಡಿದರು. ತಂತ್ರಜ್ಞಾನದ ಅಭಿವೃದ್ಧಿಯ ಕನಸುಗಳನ್ನು ಜಾರಿಗೊಳಿಸಿದರು. ಉನ್ನತ ಶಿಕ್ಷಣಕ್ಕೆ ಮಹತ್ವ ನೀಡಿ ಅನೇಕ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಿದರು. ಟೆಲಿಕಾಂನಲ್ಲಿ ಕ್ರಾಂತಿ ಮಾಡಿದರು. ಕಂಪ್ಯೂಟರಿಕರಣಕ್ಕೆ ಒತ್ತು ನೀಡಿದರು. ಪಂಚಾಯತ್ ರಾಜ್ ವ್ಯವಸ್ಥೆ ಸರಿಪಡಿಸಿದರು. ಹೊಸ ಶಿಕ್ಷಣ ನೀತಿ ಜಾರಿಗೊಳಿಸಿದರು ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಇಂಟಕ್ ವಿಭಾಗದ ಅಧ್ಯಕ್ಷ ಕೆ.ಎಂ. ಮಂಜುನಾಥ್, ಮುಖಂಡರಾದ ಮಹಮ್ಮದ್ ಜಿಕ್ರಿಯ, ಕೆ.ಜಿ. ರಹಮತ್ ಉಲ್ಲಾ, ಎನ್.ಎಸ್. ವೀರಭದ್ರಪ್ಪ, ಡಿ. ಶಿವಕುಮಾರ್, ಆರ್.ಬಿ.ಝೆಡ್. ಬಾಷಾ, ಬಿ.ಎಸ್. ಸುರೇಶ್, ಮುಬಾರಕ್, ಹರೀಶ್, ನವೀನ್, ರಿಯಾಜ್ ಮತ್ತಿತರರು ಇದ್ದರು.