ಹೊನ್ನಾಳಿ: ಕೊರೊನಾ ಮೂರನೇ ಅಲೆಯನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದು, ಅದಕ್ಕಾಗಿ ಅವಳಿ ತಾಲ್ಲೂಕಿನಲ್ಲಿ ಒಟ್ಟು ಎರಡು ಸಾವಿರ ಹಾಸಿಗೆಗಳನ್ನು ಸಿದ್ಧಪಡಿಸಲಾಗಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ತಾಲ್ಲೂಕಿನ ಅರಬಗಟ್ಟೆಯ ಕೋವಿಡ್ ಕೇರ್ ಸೆಂಟರ್ನಿಂದ ಗುಣಮುಖರಾಗಿ ಮನೆಗೆ ತೆರಳಿದವರಿಗೆ ಹೂಮಳೆ ಸುರಿಸಿ ಬೀಳ್ಕೊಟ್ಟ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಅವಳಿ ತಾಲ್ಲೂಕಿನಲ್ಲಿ ಕೊರೊನಾ ಎರಡನೇ ಅಲೆ ಇಳಿಮುಖವಾಗಿದೆ. ಮೂರನೇ ಅಲೆ ಕುರಿತು ತಜ್ಞರು ಎಚ್ಚರಿಕೆ ನೀಡಿರುವುದರಿಂದ ಮುಂಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.
ಕೊರೊನಾದಿಂದ ಗುಣಮುಖರಾದ 32 ಜನರಿಗೆ ಹೂಮಳೆ ಸುರಿಸುವ ಮೂಲಕ ಬೀಳ್ಕೊಟ್ಟರು. ಗುಣಮುಖರಾದ ಎಲ್ಲರೂ ತಮ್ಮ ಗ್ರಾಮಗಳಿಗೆ ತೆರಳಿದ ನಂತರ ಕೊರೊನಾ ವಾರಿಯರ್ಗಳಾಗಿ ಕೆಲಸ ಮಾಡುವಂತೆ ಮನವಿ ಮಾಡಿದರು.
ಊಟದ ವ್ಯವಸ್ಥೆ: ಅರಬಗಟ್ಟೆ ಕೋವಿಡ್ ಕೇರ್ ಸೆಂಟರ್ನಲ್ಲಿರುವ ಕೊರೊನಾ ಸೋಂಕಿತರು ಹಾಗೂ ಲಸಿಕೆ ಹಾಕಿಸಿಕೊಳ್ಳಲು ಬಂದವರಿಗೆ ಬೆಳಗಿನ ಉಪಾಹಾರ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಿಸಿದ್ದರು.