ದಾವಣಗೆರೆ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಹದ ಮಾಡುವುದಾಗಿ ಹೇಳಲು ರಾಜ್ಯವೇನು ಅವರ ಅಪ್ಪನ ಆಸ್ತಿಯಾ’ ಎಂದು ಎಚ್.ಡಿ. ರೇವಣ್ಣನ ವಿರುದ್ಧ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಹರಿಹಾಯ್ದರು.
ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ‘ಯಡಿಯೂರಪ್ಪ ಅವರನ್ನು ಜನ ಆಯ್ಕೆ ಮಾಡಿದ್ದಾರೆ. ಪಕ್ಷ ಅವರಿಗೆ ಜವಾಬ್ದಾರಿ ನೀಡಿದೆ. ರೇವಣ್ಣನ ಗೂಂಡಾಗಿರಿ, ಮಾಟಮಂತ್ರ ನಡೆಯಲ್ಲ’ ಎಂದರು.
ಈ ಚುನಾವಣೆಯ ಬಳಿಕವೂ ಬಿಜೆಪಿ ಸರ್ಕಾರ ಬೀಳುವುದಿಲ್ಲ. ಈಗಾಗಲೇ 105 ಮಂದಿ ಶಾಸಕರು ಇದ್ದಾರೆ. ಒಬ್ಬರು ಪಕ್ಷೇತರರು, ಒಬ್ಬರು ಬಿಎಸ್ಪಿ ಶಾಸಕರ ಬೆಂಬಲ ಇದೆ. ಅಲ್ಲದೇ ಈ ಬಾರಿ 15ಕ್ಕೆ 15 ಸ್ಥಾನಗಳಲ್ಲಿಯೂ ಬಿಜೆಪಿ ಗೆಲ್ಲಲಿದೆ ಎಂದರು.
‘ಡಿ.9ರ ನಂತರ ಸಿಹಿ ಹಂಚುವುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದು ಬಿಜೆಪಿ ಸರ್ಕಾರ ಬೀಳುತ್ತದೆ ಎಂಬರ್ಥದಲ್ಲಿ ಅಲ್ಲ. ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷದ ಸ್ಥಾನದಿಂದ ಇಳಿಸಿ ಪಕ್ಷದ ಹಿರಿಯನ್ನು ಕೂರಿಸುವ ಮೂಲಕ ಸಿಹಿ ಹಂಚುವುದಾಗಿ ಪರೋಕ್ಷವಾಗಿ ಹೇಳಿದ್ದಾರೆ. ಮೂಲ ಕಾಂಗ್ರೆಸಿಗರಿಗು ಸೇರಿ ಸಿದ್ದರಾಮಯ್ಯ ಅವರನ್ನು ಒಂಟಿಯಾಗಿ ಮಾಡಲು ಪ್ಲಾನ್ ಮಾಡಿದ್ದಾರೆ’ ಎಂದು ಖರ್ಗೆ ಹೇಳಿಕೆಯನ್ನು ವ್ಯಾಖ್ಯಾನಿಸಿದರು.