ದಾವಣಗೆರೆ: ಭದ್ರಾ ಜಲಾಶಯದಿಂದ ನೀರು ಹರಿಸುತ್ತಿದ್ದು, ಹೆಚ್ಚು ನೀರು ಬೇಡುವ ಭತ್ತವನ್ನು ಬೆಳೆಯದೇ ಪರ್ಯಾಯ ಬೆಳೆ ಬೆಳಯುವಂತೆ ನೀರಾವರಿ ನಿಗಮದ ಕಾರ್ಯಪಾಲಕ ಎಂಜಿನಿಯರ್ ತಿಳಿಸಿದ್ದಾರೆ.
ಎಡದಂಡೆ ನಾಲೆ, ಬಲದಂಡೆ ನಾಲೆ, ಆನವೇರಿ, ದಾವಣಗೆರೆ, ಮಲೆಬೆನ್ನೂರು, ಹರಿಹರ ಶಾಖಾ ನಾಲೆಗಳಿಗೆ ಆ.16ರಿಂದ ನೀರು ಹರಿಸಲಾಗುತ್ತಿದೆ. ಅದರಂತೆ ಭದ್ರಾ ಬಲದಂಡೆ ಕಾಲುವೆ ವಿಭಾಗದಡಿ ಬರುವ ಎಲ್ಲ ವಿತರಣಾ ಕಾಲುವೆಗಳಿಗೆ ಆ.23ರಿಂದ ಪ್ರತಿ 10 ದಿನಗಳ ಅವಧಿಯ ಸರದಿಯಲ್ಲಿ ನೀರು ಹರಿಸಲಾಗುತ್ತದೆ.
ಹೆಚ್ಚು ನೀರುಣ್ಣುವ ಭತ್ತ ಇನ್ನಿತರ ಬೆಳೆಗಳನ್ನು ಬೆಳೆಯಬಾರದು. ನೀರಾವರಿ ಕಾಲುವೆ, ಕಟ್ಟಡಗಳನ್ನು ಜಖಂಗೊಳಿಸಬಾರದು. ನಿಯಮಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಳಸಬಾರದು. ಅನಧಿಕೃತವಾಗಿ ಪಂಪ್ಸೆಟ್ ಅಳವಡಿಸಿ ನೀರು ಹಾಯಿಸಬಾರದು ಎಂದು ಅವರು ಪ್ರಕಟಣೆ ನೀಡಿದ್ದಾರೆ.