ದಾವಣಗೆರೆ: ಕೊಳೆಗೇರಿಯಲ್ಲಿ ವಾಸ ಮಾಡುವ ಜನರಿಗೆ ಹಕ್ಕು ಪತ್ರ ನೀಡುವಂತೆ ಆಗ್ರಹಿಸಿ ಇಲ್ಲಿನ ನೆರಳು ಬೀಡಿ ಕಾರ್ಮಿಕರ ಯೂನಿಯನ್ ವತಿಯಿಂದ ಮಂಗಳವಾರ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ದಾವಣಗೆರೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ಗೆ ಮನವಿ ಸಲ್ಲಿಸಲಾಯಿತು.
ನಗರದಲ್ಲಿ ಘೋಷಿತ ಕೊಳೆಗೇರಿಗಳಲ್ಲಿ ಸಾಮಾಜಿಕ - ಆರ್ಥಿಕ ಸಮೀಕ್ಷೆಯನ್ನು ಮಾಡಲಾಗಿದೆ. ಆ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ವಿತರಿಸಬೇಕಾಗಿದೆ. ಹಾಗಾಗಿ ಆದಷ್ಟು ಬೇಗ ಅರ್ಹ ಎಂದು ಸಮೀಕ್ಷೆಯಲ್ಲಿ ಗುರುತಿಸಲಾದ ಹಕ್ಕು ಪತ್ರಗಳನ್ನು ನೀಡಬೇಕು. ಆರ್ಥಿಕ ಸಾಮಾಜಿಕ ಸಮೀಕ್ಷೆಯನ್ನು ಮಾಡಿದ ಕುಟುಂಬಗಳಿಗೆ ತಕ್ಷಣ ಹಕ್ಕುಪತ್ರಗಳನ್ನು ವಿತರಿಸಬೇಕು ಎಂದು ಒತ್ತಾಯಿಸಲಾಯಿತು.
ಚಂದ್ರೋದಯ ನಗರ, ಮಹಾವೀರ ನಗರ, ಅಮರಪ್ಪನ ತೋಟ, ಜಾವಗಲ್ ಬಾಬಾ ನಗರಗಳನ್ನು (ಜೋಗಲ್ ಬಾಬಾ ನಗರ) ಕೂಡ ಕೊಳೆಗೇರಿಗಳು ಎಂದು ಘೋಷಣೆ ಮಾಡಬೇಕು. ಅಲ್ಲಿಯೂ ಆರ್ಥಿಕ, ಸಾಮಾಜಿಕ ಸಮೀಕ್ಷೆ ಮಾಡಬೇಕು. ಸಮೀಕ್ಷೆಯಾದ ನಗರಗಳಲ್ಲಿ ಮನೆಗಳನ್ನು ಮಾರಾಟಕ್ಕೆ ತೆಗೆದುಕೊಡವರಿಗೆ ಹಕ್ಕುಪತ್ರ ನೀಡಬೇಕು. ಎಲ್ಲ ಸ್ಲಂಗಳಲ್ಲಿ ಮೂಲ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಲಾಯಿತು.
ಯೂನಿಯನ್ ನ ಅಧ್ಯಕ್ಷೆ ಜಬೀನಾ ಖಾನಂ, ಪ್ರಧಾನ ಕಾರ್ಯದರ್ಶಿ ಎಂ. ಕರಿಬಸಪ್ಪ, ಉಪಾಧ್ಯಕ್ಷೆ ಶಿರಿನ್ ಬಾನು, ಹೋರಾಟಗಾರ್ತಿ ಸಬ್ರೀನ್ ತಾಜ್, ಸಬ್ರಿನ್, ಶಬಿನಾಬಿ,ಶಬೀನಾ ಬಾನು, ಪರ್ವಿನ್ ಬಾನು, ಸಫೂರ ಬಾನು ಅವರೂ ಇದ್ದರು.