ಸಂತೇಬೆನ್ನೂರು:ಸಮೀಪದ ಕಾಶೀಪುರ ಕ್ಯಾಂಪ್ ಬಳಿಯ ಜಮೀನೊಂದರಲ್ಲಿ ಬಂಡೆಗಳನ್ನು ಸ್ಫೋಟಿಸಲು ಅಕ್ರಮ ಜಿಲೆಟಿನ್ ಕಡ್ಡಿಗಳು ಹಾಗೂ ಇತರೆ ಪರಿಕರಗಳನ್ನು ಬಳಸಿದ್ದ ಕೆರೆಬಿಳಿಚಿ ಆರೋಪಿ ಪರ್ವೀಜ್ನನ್ನು ಸಂತೇಬೆನ್ನೂರು ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.
ಪರ್ವೀಜ್ ಜಮೀನಿನಲ್ಲಿ ಬಂಡೆಗಳಿದ್ದವು. ಜಮೀನು ಸಮತಟ್ಟುಗೊಳಿಸಲು ಸೋಮವಾರ ರಾತ್ರಿ ಮತ್ತೊಬ್ಬ ಆರೋಪಿ ಗಿರೀಶನೊಂದಿಗೆ ಸೇರಿ ಬಂಡೆಗಳನ್ನು ಸ್ಫೋಟಿಸಿದ್ದಾರೆ.
8 ಜಿಲೆಟಿನ್ ಕಡ್ಡಿಗಳು ಹಾಗೂ ಜೀವಂತ ಎಲೆಕ್ಟ್ರಾನಿಕ್ ಡಿಟೋನೇಟರ್, ಮೆಗ್ಗರ್ ಮಷಿನ್, 30ಮೀ ಕೇಬಲ್ ಹಾಗೂ ಪ್ಲಾಸ್ಟಿಕ್ ಕ್ಯಾನ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
‘ಸ್ಫೋಟಕಗಳನ್ನು ಹೊನ್ನಾಳಿ ಕ್ವಾರಿಯಲ್ಲಿ ಕೆಲಸ ಮಾಡುವ ಮತ್ತೊಬ್ಬ ಗಿರೀಶ್ ಸರಬರಾಜು ಮಾಡಿದ್ದಾನೆ. ಎಲ್ಲಿಂದ ತಂದಿದ್ದಾನೆ ಎಂಬ ಮಾಹಿತಿ ಇಲ್ಲ’ ಎಂದು ಆರೋಪಿ ಪರ್ವೀಜ್ ತಿಳಿಸಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.
ಪಿಎಸ್ಐ ಶಿವರುದ್ರಪ್ಪ ಮೇಟಿ, ಸಿಬ್ಬಂದಿ ಮೊಹಮ್ಮದ್ ಅಕ್ರಂವುಲ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಸಂತೇಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.