ದಾವಣಗೆರೆ: ನಗರದ ಎಸ್ಒಜಿ ಕಾಲೊನಿಯ ಹೊರವಲಯದಲ್ಲಿ ಶನಿವಾರ ರಾತ್ರಿ ರೌಡಿ ಬುಳ್ಳ ನಾಗನನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ರಾತ್ರಿ 11.30 ಸುಮಾರಿಗೆ ಎಸ್ಒಜಿ ಕಾಲೊನಿ ಬಳಿ ಬುಳ್ಳ ನಾಗನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಎಸ್.ಎಸ್. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಾವೇರಿ ಜಿಲ್ಲೆಯ ಕುಮಾರಪಟ್ಟಣ ಬಳಿ ಎರಡು ವರ್ಷಗಳ ಹಿಂದೆಯೂ ಬುಳ್ಳ ನಾಗನ ಮೇಲೆ ಹಲ್ಲೆ ನಡೆದಿತ್ತು. ಹಳೆ ವೈಷಮ್ಯದ ಹಿನ್ನೆಲೆಯಲ್ಲೇ ಕೊಲೆ ಮಾಡಿರಬಹುದು ಎನ್ನಲಾಗಿದೆ.
ಎಸ್.ಎಸ್. ಆಸ್ಪತ್ರೆಯ ಬಳಿ ತಡ ರಾತ್ರಿ ಜನ ಬಂದು ಸೇರುತ್ತಿದ್ದರು. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಚೇತನ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.