ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆಯಲ್ಲಿ ರೇಣುಕಾಚಾರ್ಯ ಸಹೋದರನ ಮೇಲೆ ಹಲ್ಲೆಗೆ ಯತ್ನ: ಕಾರಣ ಏನು?

Last Updated 28 ಮಾರ್ಚ್ 2022, 12:30 IST
ಅಕ್ಷರ ಗಾತ್ರ

ದಾವಣಗೆರೆ: ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರ ಸಹೋದರ ಎಂ.ಪಿ. ದಾರಕೇಶ್ವರಯ್ಯ ಅವರು ‘ಬೇಡ ಜಂಗಮ’ ಹೆಸರಿನಲ್ಲಿ ಪರಿಶಿಷ್ಟ ಜಾತಿಯ ಪ್ರಮಾಣಪತ್ರ ಪಡೆದಿರುವುದನ್ನು ಖಂಡಿಸಿ ಪರಿಶಿಷ್ಟ ಸಮುದಾಯದ ಮುಖಂಡರು ಸೋಮವಾರ ದಾರಕೇಶ್ವರಯ್ಯ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು. ವಾಗ್ವಾದ ವಿಕೋಪಕ್ಕೆ ತೆರಳಿದಾಗ ಪೊಲೀಸರು ಪ್ರತಿಭಟನಕಾರರಿಂದ ದಾರಕೇಶ್ವರಯ್ಯ ಅವರನ್ನು ರಕ್ಷಿಸಿ ವಾಹನದಲ್ಲಿ ಕರೆದುಕೊಂಡು ಹೋದರು.

ಕಾನೂನು ಬದ್ಧವಾಗಿಯೇ ‘ಬೇಡ ಜಂಗಮ’ ಪ್ರಮಾಣ ಪತ್ರ ಪಡೆದುಕೊಂಡಿರುವುದಾಗಿ ದಾರಕೇಶ್ವರಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಸಮರ್ಥಿಸಿಕೊಂಡು ವರದಿಗಾರರ ಕೂಟದಿಂದ ಹೊರಕ್ಕೆ ಬರುತ್ತಿದ್ದಂತೆ ಪರಿಶಿಷ್ಟ ಸಮುದಾಯದ ಕಾರ್ಯಕರ್ತರು ಅವರನ್ನು ಸುತ್ತುವರಿದು ಘೋಷಣೆಗಳನ್ನು ಕೂಗಿದರು. ಈ ವೇಳೆ ಮಾತಿಗೆ ಮಾತು ಬೆಳೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ತಕ್ಷಣವೇ ಮಧ್ಯ ಪ್ರವೇಶಿಸಿದ ಪೊಲೀಸರು, ದಾರಕೇಶ್ವರಯ್ಯ ಅವರನ್ನು ಪ್ರತಿಭಟನಾಕಾರರಿಂದ ಬಿಡಿಸಿಕೊಂಡು ಪೊಲೀಸ್‌ ವಾಹನದ ಒಳಗೆ ಕೂರಿಸಿಕೊಂಡರು.

ವಾಹನ ಮುಂದಕ್ಕೆ ಹೋಗದಂತೆ ತಡೆದ ಪ್ರತಿಭಟನಾಕಾರರು, ತಮ್ಮ ವಶಕ್ಕೆ ಒಪ್ಪಿಸುವಂತೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ‘ದಲಿತರ ಹಕ್ಕನ್ನು ಕಿತ್ತುಕೊಂಡು ರೇಣುಕಾಚಾರ್ಯ ಹಾಗೂ ದಾರುಕೇಶ್ವರಯ್ಯ ಅವರನ್ನು ಬಂಧಿಸಬೇಕು’ ಎಂದು ಘೋಷಣೆಗಳನ್ನು ಕೂಗಿದರು.

ಪರಿಶಿಷ್ಟ ಸಮುದಾಯದ ಮುಖಂಡ ಹೂವಿನಮಡು ಅಂಜಿನಪ್ಪ, ‘ದಲಿತ ಸಮುದಾಯದಲ್ಲೇ ಜನಿಸಿರುವುದಾದರೆ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಯಾವುದಾದರೊಂದು ಜಾತಿಯ ಹುಡುಗನಿಗೇ ರೇಣುಕಾಚಾರ್ಯ ಅವರ ಮಗಳನ್ನು ಮದುವೆ ಮಾಡಿಕೊಡಲಿ’ ಎಂದು ಸವಾಲು ಹಾಕಿದರು.

ಈ ನಡುವೆ ಪೊಲೀಸರು ಪ್ರತಿಭಟನಾಕಾರರ ಕಣ್ಣು ತಪ್ಪಿಸಿ ದಾರಕೇಶ್ವರಯ್ಯ ಅವರನ್ನು ಇನ್ನೊಂದು ವಾಹನದಲ್ಲಿ ಕರೆದುಕೊಂಡು ಹೋದರು. ಇದು ಗಮನಕ್ಕೆ ಬರುತ್ತಿದ್ದಂತೆ ಕಾರ್ಯಕರ್ತರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು. ಅರ್ಧ ಹೆಚ್ಚು ಗಂಟೆ ದಾರಕೇಶ್ವರಯ್ಯ ಅವರು ಪೊಲೀಸ್‌ ವಾಹನದಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದರು.

ಪರಿಶಿಷ್ಟ ಸಮುದಾಯದ ಮುಖಂಡರಾದ ಕಬ್ಬಳ್ಳಿ ಮೈಲಪ್ಪ, ಹೆಗ್ಗೆರೆ ರಂಗಪ್ಪ, ಡಿ. ಹನುಮಂತಪ್ಪ, ಆಟೊ ತಿಮ್ಮಣ್ಣ, ನೇರ್ಲಗಿ ರಾಜೇಶ್‌, ಬಾಡಾ ಶ್ರೀನಿವಾಸ್‌ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

****

ಸುಳ್ಳು ಆರೋಪ: ಶಾಸಕತ್ವ ರದ್ದತಿಗೆ ಒತ್ತಾಯ

‘ನಮ್ಮ ಕುಟುಂಬ ಪಡೆದ ಬೇಡ ಜಂಗಮ ಜಾತಿ ಪ್ರಮಾಣಪತ್ರವನ್ನು ಹೈಕೋರ್ಟ್‌ ಸಿಂಧುಗೊಳಿಸಿದ್ದರೂ ವಿಧಾನಸಭೆಯಲ್ಲಿ ತಪ್ಪು ಮಾಹಿತಿ ನೀಡಿ ನನ್ನ ವಿರುದ್ಧ ಸುಳ್ಳು ಆರೋಪ ಮಾಡಿರುವ ಶಾಸಕರಾದ ಪಿ. ರಾಜೀವ್‌, ಗೂಳಿಹಟ್ಟಿ ಶೇಖರ್‌, ಪ್ರಿಯಾಂಕ ಖರ್ಗೆ, ಎನ್‌.ಮಹೇಶ್‌ ಅವರ ಶಾಸತಕತ್ವವನ್ನು ರದ್ದುಗೊಳಿಸಬೇಕು’ ಎಂದು ಅಖಿಲ ಕರ್ನಾಟಕ ಡಾ.ಅಂಬೇಡ್ಕರ್‌ ಬೇಡ ಜಂಗಮ ಪರಿಶಿಷ್ಟ ಜಾತಿ ರಕ್ಷಣಾ ವೇದಿಕೆಯ ಅಧ್ಯಕ್ಷ ಎಂ.ಪಿ. ದಾರಕೇಶ್ವರಯ್ಯ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

‘ಕಲಬುರಗಿ ಲೋಕಸಭಾ ಹಾಗೂ ಕನಕಗಿರಿ ವಿಧಾನಸಭಾ ಮೀಸಲು ಕ್ಷೇತ್ರದಿಂದ ನಾನು ಚುನಾವಣೆಗೆ ಸ್ಪರ್ಧಿಸಿದ್ದಾಗ ನಾಮಪತ್ರವನ್ನು ತಿರಸ್ಕರಿಸಿರಲಿಲ್ಲ. ಬೇಡ ಜಂಗಮ ಪ್ರಮಾಣಪತ್ರವನ್ನು ನಮಗೆ ನೀಡುವಂತೆ ಹೈಕೋರ್ಟ್‌ ಕೂಡ ಆದೇಶ ನೀಡಿದೆ. ಹೀಗಿದ್ದರೂ ಕೆಲವರು ದಿಕ್ಕು ತಪ್ಪಿಸುತ್ತಿದ್ದಾರೆ’ ಎಂದು ದೂರಿದರು.

‘ಬೇಡ ಜಂಗಮ ಪ್ರಮಾಣಪತ್ರ ಪಡೆದಿರುವ ಧಾರವಾಡದ ವಕೀಲ ವೀರಣ್ಣ ಹಿರೇಮಠ ಅವರ ಪುತ್ರಿ ಚೇತನಾ ಹಿರೇಮಠ ಅವರಿಗೆ ₹ 45 ಲಕ್ಷ ಸಾಲಸೌಲಭ್ಯ ಪ್ರಮಾಣಪತ್ರವನ್ನು ಸಿದ್ದರಾಮಯ್ಯ ಅವರೇ ನೀಡಿರುವ ಬಗ್ಗೆ ದಾಖಲೆ ಇದೆ. ನನ್ನ ಸಹೋದರನ ಪುತ್ರಿ ಚೇತನಾಗೆ ಬೇಡ ಜಂಗಮ ಪ್ರಮಾಣಪತ್ರವನ್ನು ನಾನು ಕೊಡಿಸಿದ್ದರೂ ಯಾವುದೇ ಸರ್ಕಾರಿ ಸೌಲಭ್ಯವನ್ನು ಪಡೆದುಕೊಂಡಿಲ್ಲ. ಚುನಾವಣೆಗೆ ಸ್ಪರ್ಧಿಸಲು ಮಾತ್ರ ಈ ಪ್ರಮಾಣಪತ್ರವನ್ನು ನಾನು ಬಳಸಿಕೊಂಡಿದ್ದೇನೆ’ ಎಂದು ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT