ಲಖನೌ: ಉತ್ತರ ಪ್ರದೇಶದ ಹಲವು ಭಾಗಗಳಲ್ಲಿ ಬುಧವಾರ ರಾತ್ರಿ ಸಂಭವಿಸಿದ ಚಂಡಮಾರುತದಿಂದಾಗಿ 18 ಮಂದಿ ಸಾವಿಗೀಡಾಗಿದ್ದು, 27 ಮಂದಿ ಗಾಯಗೊಂಡಿದ್ದಾರೆ.
ರಾಜ್ಯದ ಪಶ್ಚಿಮ ಭಾಗದ ಒಂಬತ್ತು ಜಿಲ್ಲೆಗಳಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿದೆ. ಈ ದುರಂತದಲ್ಲಿ 37 ಜಾನುವಾರುಗಳು ಸಹ ಸಾವಿಗೀಡಾಗಿದ್ದು, ಏಳು ಮನೆಗಳು ಹಾನಿಗೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪರಿಹಾರ ಕಾರ್ಯಗಳನ್ನು ತ್ವರಿತಗತಿಯಲ್ಲಿ ಕೈಗೊಳ್ಳುವಂತೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಮೇ 2 ಮತ್ತು 3ರಂದು ಸಂಭವಿಸಿದ ಚಂಡಮಾರುತದಲ್ಲಿ ಇದೇ ಪ್ರದೇಶದಲ್ಲಿ ಅತಿ ಹೆಚ್ಚು ಹಾನಿ ಸಂಭವಿಸಿತ್ತು. ಆಗ 134 ಮಂದಿ ಸಾವಿಗೀಡಾಗಿದ್ದರು.