ದಾವಣಗೆರೆ: ರೈತನ ಖಾತೆ ಬದಲಾವಣೆಗೆ ₹ 1 ಲಕ್ಷ ಬೇಡಿಕೆ ಇಟ್ಟಿದ್ದ ಉಪ ವಿಭಾಗಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ ಟಿ.ಕೆ. ರಘು ಎಸಿಬಿ ಬಲೆಗೆ ಬಿದ್ದಿದ್ದಾರೆ.
ಹಾವೇರಿ ಜಿಲ್ಲೆಯ ಮೇದುರು ಗ್ರಾಮದ ಚಮನ್ಸಾಬ್ ಅವರ ಜಮೀನು ಖಾತೆ ಬದಲಾವಣೆ ಆಗಿರಲಿಲ್ಲ. ₹ 1 ಲಕ್ಷ ನೀಡಿದರೆ ಮಾಡಿಸಿಕೊಡುವುದಾಗಿ ರಘು ತಿಳಿಸಿದ್ದರು. ಚಮನ್ಸಾಬ್ ಈ ಬಗ್ಗೆ ದಾವಣಗೆರೆ ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಿದ್ದರು.
ಎವಿಕೆ ಕಾಲೇಜು ರಸ್ತೆಯಲ್ಲಿ ಮಂಗಳವಾರ ರಾತ್ರಿ ಲಂಚ ಸ್ವೀಕರಿಸುವಾಗ ಎಸಿಬಿಯವರು ದಾಳಿ ಮಾಡಿ ಹಿಡಿದಿದ್ದಾರೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಕಾರ್ಯಾಚರಣೆಯಲ್ಲಿ ಎಸಿಬಿ ಡಿವೈಎಸ್ಪಿ ಎಚ್.ಎಸ್. ಪರಮೇಶ್ವರ್, ಇನ್ಸ್ಪೆಕ್ಟರ್ಗಳಾದ ನಾಗಪ್ಪ, ಮಧುಸೂದನ್, ಸಿಬ್ಬಂದಿ ಭಾಗವಹಿಸಿದ್ದರು.