ದಾವಣಗೆರೆ: ಕೃಷಿ ಉತ್ಪನ್ನಗಳ ದರಗಳ ಅನುಪಾತದ ಆಧಾರದಲ್ಲಿ ಶಾಸಕರು, ಸಂಸದರು ಹಾಗೂ ಸರ್ಕಾರಿ ನೌಕರರ ವೇತನ ನಿಗದಿಗೊಳಿಸಬೇಕು ಎಂಬುದೂ ಸೇರಿ ಐದು ನಿರ್ಣಯಗಳನ್ನು ಮಂಗಳವಾರ ಅಂತ್ಯಗೊಂಡ ಎರಡು ದಿನಗಳ ಜಿಲ್ಲಾ 10ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೈಗೊಳ್ಳಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಮಂಜುನಾಥ ಕುರ್ಕಿ ಅಧ್ಯಕ್ಷತೆಯಲ್ಲಿ ನಡೆದ ಬಹಿರಂಗ ಅಧಿವೇಶನದಲ್ಲಿ ಪರಿಷತ್ತಿನ ಜಿಲ್ಲಾ ಘಟಕದ ಕೋಶಾಧ್ಯಕ್ಷ ಬುರುಡೇಕಟ್ಟೆ ಮಂಜಪ್ಪ ನಿರ್ಣಯಗಳನ್ನು ಮಂಡಿಸಿದರು.
ದಾವಣಗೆರೆ ಜಿಲ್ಲೆಯಲ್ಲಿ ಎಫ್.ಎಂ. ರೇಡಿಯೊ ಕೇಂದ್ರ ಸ್ಥಾಪನೆ ಮಾಡಬೇಕು; ಜಿಲ್ಲೆಯ ಕನ್ನಡ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಎಷ್ಟೇ ಕಡಿಮೆ ಮಕ್ಕಳಿದ್ದರೂ ಮುಚರಚಬಾರದು; ಕೊಂಡಜ್ಜಿಯಲ್ಲಿ ಸ್ಥಾಪಿಸಿರುವ ರಂಗಭೂಮಿ ಶಾಲೆಯ ಕಾರ್ಯಗಳನ್ನು ತೀವ್ರಗೊಳಿಸಬೇಕು ಹಾಗೂ ಕನ್ನಡದ ಅನುಭಾವದ ಕವಿ ಮಹಾಲಿಂಗರಂಗರ ಐಕ್ಯಸ್ಥಳ ಅಭಿವೃದ್ಧಿ ಮಾಡಬೇಕು ಮತ್ತು ಜಗಳೂರು ತಾಲ್ಲೂಕಿನ ಕೊಣಚಕಲ್ಲುವಿನಲ್ಲಿ ಅಧ್ಯಯನ ಕೇಂದ್ರ ಸ್ಥಾಪಿಸಬೇಕು ಎಂದು ನಿರ್ಣಯ ಕೈಗೊಳ್ಳಲಾಯಿತು.
ಪರಿಷತ್ತಿನ ಪಾದಾಧಿಕಾರಿಗಳು ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರು ಹಾಜರಿದ್ದರು.