ದಾವಣಗೆರೆ: ಧರ್ಮವನ್ನು ಕಾಯುವವರನ್ನು ಧರ್ಮ ಕಾಯುತ್ತದೆ. ಧರ್ಮ ಮತ್ತು ದೇಶಕ್ಕೆ ದ್ರೋಹ ಬಗೆಯುವವರನ್ನು, ಉಂಡ ಮನೆಗೆ ಕನ್ನ ಹಾಕುವವರನ್ನು ಧರ್ಮ ಎಂದಿಗೂ ಉಳಿಸುವುದಿಲ್ಲ ಎಂದು ಬಂಜಾರ ಸಮುದಾಯದ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹೇಳಿದರು.
ಇಲ್ಲಿ ಭಾನುವಾರ ನಡೆದ ಹಿಂದೂ ಜನಜಾಗೃತಿ ಸೇವಾ ಸಮಿತಿಯ ಉದ್ಘಾಟನಾ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.
ಧರ್ಮ ಮತ್ತು ದೇಶ ಕಾಯುವವರಿಗೆ ಗುಂಡಿಕ್ಕಿ ಕೊಲ್ಲುವ ಕೆಲವು ದೇಶದ್ರೋಹಿಗಳು ನಮ್ಮಲ್ಲಿದ್ದಾರೆ. ದೇಶ, ರಕ್ಷಣೆ ಮಾಡುವವರನ್ನು ಗುರಿ ಮಾಡಬಾರದು ಎಂದರು.
‘ಭಾರತ ಜಗತ್ತಿಗೆ ಶಾಂತಿ ಸಂದೇಶ ನೀಡಿದೆ. ಶತ್ರುಗಳನ್ನೂ ಪ್ರೀತಿ, ಗೌರವ, ಅಭಿಮಾನಿಗಳಿಂದ ಕಾಣುವ ಏಕೈಕ ದೇಶ ಭಾರತ. ಈ ನೆಲದ ಸಂಪತ್ತನ್ನು ಲೂಟಿ ಮಾಡಿದವರು ಯಾರು? ಗುಡಿಗುಂಡಾರಗಳನ್ನು ನಾಶ ಮಾಡಿದವರು ಯಾರು? ದೇಶದ ಶಾಂತಿಗೆ ಭಂಗ ತರುವ ಕೆಲಸವನ್ನು ಮಾಡುತ್ತಿರುವವರು ಯಾರು? ಎಂಬುದು ಶಿವಮೊಗ್ಗದ ಹರ್ಷನ ಹತ್ಯೆ ವಿಷಯದಲ್ಲಿಯೇ ಜಗಜ್ಜಾಹೀರಾಗಿದೆ’ ಎಂದು ಹೇಳಿದರು.
‘ಸ್ವಾರ್ಥಕ್ಕಾಗಿ ಕೆಲವರು ದ್ವೇಷವನ್ನು ಬಿತ್ತುತ್ತಿದ್ದಾರೆ. ಅದನ್ನು ನಾವು ಎಂದಿಗೂ ಕ್ಷಮಿಸುವುದಿಲ್ಲ’ ಎಂದು ಎಚ್ಚರಿಕೆ ನೀಡಿದರು.
ದೇಶದಲ್ಲಿನ ಎಲ್ಲ ಹಿಂದೂಗಳು ಒಗ್ಗಟ್ಟಾಗಬೇಕು. ಇಲ್ಲವಾದರೆ ಸೋದರ ಹರ್ಷನಂತಹವರ ಸಾವುಗಳು ಹೆಚ್ಚಾಗುತ್ತವೆ ಎಂದು ಶಿವಮೊಗ್ಗದ ಹರ್ಷ ಅವರ ಸಹೋದರಿ ಅಶ್ವಿನಿ ತಿಳಿಸಿದರು.
ಹರ್ಷ ಅವರ ತಾಯಿಪದ್ಮಾ, ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಚೇತನ್ ಕನ್ನಡಿಗ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ವೀಣಾ ಕನ್ನಡತಿ, ಶರಣು ಗಣಜಲಕೇಡ, ರಾಜೀವ್, ದೀಪಾ, ಜ್ಯೋತಿ, ವಿವೇಕ್, ಋಶಿಕ್, ಸೌಂದರ್ಯ, ವಿಭೂತಿ ಬಸವರಾಜ್, ಶಕುಂತಲಾ, ಅರವಿಂದ್, ದುಶ್ಯಂತ್ ಇದ್ದರು.