ದಾವಣಗೆರೆ: ರಾಮಲಿಂಗಾರೆಡ್ಡಿ ಆರೇಳು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದಾರೆ. ಮಗಳಿಗೂ ಸೀಟ್ ಕೊಡಿಸಿದ್ದಾರೆ. ಅಂಥವರು ಹೋಗುವುದು ಅನ್ಯಾಯ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ಬೇರೆಯವರು ಹೋದರೆ ಹೋಗಲಿ. ರಾಮಲಿಂಗಾ ರೆಡ್ಡಿಯಂಥವರು ಹೋಗಬಾರದಿತ್ತು ಎಂದು ಅವರು ಸೋಮವಾರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
‘ಯಡಿಯೂರಪ್ಪ, ಕುಮಾರಸ್ವಾಮಿ, ಸಿದ್ದರಾಮಯ್ಯ ಅವರ ಸುದ್ದಿಯೆಲ್ಲ ನಮಗೆ ಯಾಕೆ? ಅವರೆಲ್ಲ ಹೊಡೆದಾಡಿಕೊಂಡಿರುತ್ತಾರೆ. ನಾವು, ನೀವೆಲ್ಲ ನೋಡಿಕೊಂಡಿರುತ್ತೇವೆ. ಎಲ್ಲ ಸರಿಯಾಗುವ ಹಾಗೆ ಕಾಣಿಸುತ್ತಿದೆ. ಮುಂದೇನಾಗುತ್ತದೆಯೋ ನೋಡೋಣ’ ಎಂದರು.
ನಿಮ್ಮನ್ನು ಯಾರೂ ಕರೆದಿಲ್ಲವೇ ಎಂಬ ಪ್ರಶ್ನೆಗೆ, ‘ ನನ್ನನ್ನು ಯಾರೂ ಕರೆದಿಲ್ಲ. ಬೆಂಗಳೂರಿಗೆ ಬಾ ಎಂದೂ ಹೇಳಿಲ್ಲ’ ಎಂದು ಚಟಾಕಿ ಹಾರಿಸಿದರು.
ಸಿದ್ದರಾಮಯ್ಯ, ಖರ್ಗೆ ಎಲ್ಲ ಮುಖ್ಯಮಂತ್ರಿ ಆಗಲ್ಲ. ಈಗಿರುವ ಸರ್ಕಾರವೇ ಮುಂದುವರಿಯಲಿದೆ ಎಂದು ಆಶಾಭಾವನೆ ವ್ಯಕ್ತಪಡಿಸಿದರು.