ಹೊನ್ನಾಳಿ:ಇಲ್ಲಿನ ಹಿರೇಕಲ್ಮಠದಲ್ಲಿ ದಸರಾ ಅಂಗವಾಗಿ ಬನ್ನಿ ಮುಡಿಯುವ ಸಂಪ್ರದಾಯ ಸಂಭ್ರಮದಿಂದ ನಡೆಯಿತು.
ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯಶ್ರೀ ಬನ್ನಿಮರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಶಮಿ ಪತ್ರೆ ವಿತರಿಸಿದರು.
ನಂತರ ಅಲಂಕೃತ ಪಲ್ಲಕಿಯಲ್ಲಿ ಶ್ರೀಗಳನ್ನು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ಶ್ರೀಮಠದವರೆಗೆ ಕರೆತರಲಾಯಿತು. ಮೆರವಣಿಗೆಯುದ್ದಕ್ಕೂ ಭಕ್ತರು ಪೂಜೆ ಸಲ್ಲಿಸಿ ಶ್ರೀಗಳಿಂದ ಆಶೀರ್ವಾದ ಪಡೆದರು.
ಶ್ರೀಗಳಿಂದ ಶಮಿಪತ್ರೆ ಪಡೆದ ಭಕ್ತರು ಗುರು ಹಿರಿಯರಿಗೆ ಶಮಿಪತ್ರೆಯನ್ನು ವಿನಿಮಯ ಮಾಡಿಕೊಂಡರು. ಹತ್ತು ದಿನಗಳಿಂದ ಶ್ರೀಗಳ ನೇತೃತ್ವದಲ್ಲಿ ಶರನ್ನವರಾತ್ರಿಯ ಪ್ರಯುಕ್ತಾ ವಿಶೇಷ ಪೂಜೆ, ಉಪನ್ಯಾಸ ನಡೆದವು.
ವಿವಿಧ ಜಿಲ್ಲೆಗಳ ಭಕ್ತರು ಪಾಲ್ಗೊಂಡಿದ್ದರು.
ನೀಲಕಂಠೇಶ್ವರ, ವೀರಭದ್ರೇಶ್ವರ, ಮೈಲಾರಲಿಂಗೇಶ್ವರ, ಗಂಗಮಾಳಮ್ಮ, ಪಾಂಡುರಂಗವಿಠಲ ಸೇರಿದಂತೆ ವಿವಿಧ ಉತ್ಸವಮೂರ್ತಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡವು. ಎತ್ತಿನಗಾಡಿಯಲ್ಲಿ ಲಿಂಗೈಕ್ಯ ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳ ಭಾವಚಿತ್ರವನ್ನು ಇಟ್ಟು ಮೆರವಣಿಗೆ ಮಾಡಲಾಯಿತು.