ದಾವಣಗೆರೆ: ‘ದಿ ವಿಲನ್’ ಸಿನಿಮಾದ ಕ್ಲೈಮ್ಯಾಕ್ಸ್ನಲ್ಲಿ ಸುದೀಪ್ ಅವರು ಶಿವರಾಜ್ಕುಮಾರ್ಗೆ ಹೊಡೆಯುವ ದೃಶ್ಯ ಪ್ರದರ್ಶಿಸುತ್ತಿರುವುದನ್ನು ಖಂಡಿಸಿ ಅಖಿಲ ಕರ್ನಾಟಕ ಡಾ. ಶಿವರಾಜ್ಕುಮಾರ್ ಅಭಿಮಾನಿಗಳ ಸಂಘದ ಜಿಲ್ಲಾ ಘಟಕ ಹಾಗೂ ಕರ್ನಾಟಕ ಸಮರ ಸೇನೆ ಕಾರ್ಯಕರ್ತರು ನಗರದಲ್ಲಿ ಶನಿವಾರ ಪ್ರತಿಭಟಿಸಿದರು.
‘ದಿ ವಿಲನ್’ ಸಿನಿಮಾ ಪ್ರದರ್ಶನಗೊಳ್ಳುತ್ತಿರುವ ನಗರದ ಅಶೋಕ ಚಿತ್ರಮಂದಿರದ ಎದುರು ಸೇರಿದ ಕಾರ್ಯಕರ್ತರು, ನಿರ್ದೇಶಕ ಪ್ರೇಮ್ ವಿರುದ್ಧ ಘೋಷಣೆಗಳನ್ನು ಕೂಗಿದರು.
ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಯೋಗೀಶ್ ಮಾತನಾಡಿ, ‘ನಿರ್ದೇಶಕ ಪ್ರೇಮ್ ಅವರು ಸುದೀಪ್ ಅವರು ಶಿವಣ್ಣಗೆ ಹೊಡೆದಿರುವ ದೃಶ್ಯವನ್ನು ಸಿನಿಮಾದಲ್ಲಿ ಉಳಿಸಿಕೊಂಡಿರುವುದು ಅಭಿಮಾನಿಗಳಿಗೆ ನೋವು ತಂದಿದೆ. ಬದಲಾಯಿಸಲು ಅವಕಾಶವಿದ್ದರೂ ಅನಗತ್ಯವಾಗಿ ಈ ದೃಶ್ಯವನ್ನು ಅವರು ಉಳಿಸಿಕೊಂಡಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಿನಿಮಾದಲ್ಲಿರುವ ಈ ದೃಶ್ಯವನ್ನು ಸೋಮವಾರದೊಳಗೆ ಕೈಬಿಡದಿದ್ದರೆ ಸಿನಿಮಾ ಮಂದಿರದ ಎದುರು ಪ್ರೇಮ್ ಅವರ ಪ್ರತಿಕೃತಿಯನ್ನು ದಹಿಸಿ ಪ್ರತಿಭಟಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.
ಕರ್ನಾಟಕ ಸಮರ ಸೇನೆಯ ರಾಜ್ಯ ಕಾರ್ಯಾಧ್ಯಕ್ಷ ಬಿ. ವಾಸುದೇವ, ಕರಿಬಸಪ್ಪ ಕಿತ್ತೂರು, ಆವರಗೆರೆ ಪರಮೇಶ್ವರ, ಪರಶುರಾಮ್, ಕಿರಣಕುಮಾರ್, ಸಿದ್ದೇಶ್, ಶಿವಕುಮಾರ್, ಪ್ರಕಾಶ್ ಅವರೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.