ದಾವಣಗೆರೆ: ಸಿದ್ದರಾಮಯ್ಯ–75 ಅಮೃತ ಮಹೋತ್ಸವಕ್ಕೆ ರಾಜ್ಯದ ವಿವಿಧಡೆಯಿಂದ ಬಂದಿದ್ದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಊಟದ ಸವಿದರು.
ಬುಧವಾರ ಬೆಳಿಗ್ಗೆಯಿಂದಲೇ ಬಂದ ಜನರಿಗೆ ಇಲ್ಲಿನ ಶಾಮನೂರು ಪ್ಯಾಲೇಸ್ ಮೈದಾನದಲ್ಲಿ ಶುಚಿ ರುಚಿಯಾದ ಭೋಜನ ತಯಾರಿಸಿದ್ದು, ಲಕ್ಷಾಂತರ ಮಂದಿ ಊಟ ಮಾಡಿದರು.
ಪುಲಾವ್, ಮೊಸರನ್ನ, ಬಿಸಿಬೇಳೆ ಬಾತ್ ಹಾಗೂ ಮೈಸೂರು ಪಾಕ್ ಅನ್ನು ಸವಿದು ಖುಷಿಪಟ್ಟರು. ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು. 6 ಲಕ್ಷಕ್ಕೂ ಹೆಚ್ಚು ಮೈಸೂರು ಪಾಕ್ ಸಿದ್ಧಪಡಿಸಿದ್ದು ವಿಶೇಷ.
ವೇದಿಕೆಯ ಎಡಭಾಗದಲ್ಲೇ 200ಕ್ಕೂ ಕೌಂಟರ್ಗಳಲ್ಲಿ ಊಟ ಬಡಿಸಿದರು. ಅಡಿಕೆ ಎಲೆಯಲ್ಲಿ ಊಟದ ವ್ಯವಸ್ಥೆ ಮಾಡಿದ್ದು, ಜನರು ಸರತಿ ಸಾಲಿನಲ್ಲಿ ನಿಂತು ಊಟ ಸವಿದರು. ರಾಜ್ಯವಲ್ಲದೇ ತಮಿಳುನಾಡು ಹಾಗೂ ಕೇರಳದಿಂದಲೂ ಬಾಣಸಿಗರನ್ನು ಕರೆತರಲಾಗಿತ್ತು.
‘ಸಿದ್ದರಾಮಯ್ಯ ಅನ್ನಭಾಗ್ಯದ ಸರದಾರ. ಕಾರ್ಯಕ್ರಮದಲ್ಲೂ ಊಟ ಚೆನ್ನಾಗಿದೆ. ಇಷ್ಟೊಂದು ಜನಕ್ಕೆ ಊಟ ಕೊಟ್ಟಿರುವುದು ಸುಲಭದ ಮಾತಲ್ಲ. ಮೈಸೂರು ಪಾಕ್ ಚೆನ್ನಾಗಿದೆ’ ಎಂದು ಹಾವೇರಿಯ ರೈತ ಕುಮಾರ್ ಹೇಳುತ್ತಾರೆ.