ದಾವಣಗೆರೆ: ವಿದ್ಯಾರ್ಥಿಗಳಲ್ಲಿ ಕೌಶಲ ಹೆಚ್ಚಲು ವಿಚಾರಸಂಕಿರಣಗಳು ಸಹಕಾರಿ ಎಂದು ಬೆಂಗಳೂರಿನ ಎಕೆಎಕ್ಸ್ಎ ಟೆಕ್ ಪ್ರೈವೆಟ್ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕ ಡಾ. ರಘುರಾಜ್ ಕೆ. ರಾವ್ ಹೇಳಿದರು.
ನಗರದ ಬಿಐಇಟಿ ಕಾಲೇಜಿನ ಕೆಮಿಕಲ್ ಎಂಜಿನಿಯರಿಂಗ್ ವಿಭಾಗದಿಂದ ಬುಧವಾರ ಹಮ್ಮಿಕೊಂಡಿದ್ದ ‘ಕೆಮೆಕ್ಸಲ್-2022’ ವಿದ್ಯಾರ್ಥಿಗಳ ರಾಷ್ಟ್ರಮಟ್ಟದ ವಿಚಾರಸಂಕಿರಣದಲ್ಲಿ ಅವರು ಮಾತನಾಡಿದರು.
ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು ಒಂದೆಡೆ ಸೇರಿ ಸಮಾಲೋಚನೆ ಮಾಡುವುದರಿಂದ ಜ್ಞಾನವನ್ನು ಪರಸ್ಪರ ಹಂಚಿಕೊಳ್ಳಲು ಅವಕಾಶವಾಗುತ್ತದೆ. ವಿಚಾರಸಂಕಿರಣಗಳಲ್ಲಿ ಭಾಗವಹಿಸುವುದರಿಂದ ನಾಯಕತ್ವದ ಗುಣ, ಸಕಾರಾತ್ಮಕ ಚಿಂತನೆ ಬೆಳೆಯುತ್ತದೆ. ವಿಚಾರಸಂಕಿರಣಗಳು ಕೆಮಿಕಲ್ ವಿಭಾಗದ ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಬುನಾದಿಯಾಗುತ್ತದೆ ಎಂದು ತಿಳಿಸಿದರು.
ಎಂಜಿನಿಯರಿಂಗ್ ಮಾಡಿದ ಎಲ್ಲ ವಿದ್ಯಾರ್ಥಿಗಳು ಉದ್ಯೋಗ ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಉದ್ಯೋಗಿಗಳು ಆಗುವುದಕ್ಕಿಂತ ಸ್ವಂತ ಉದ್ಯಮಗಳನ್ನು ಸ್ಥಾಪಿಸಿ ಉದ್ಯೋಗದಾತರಾಗಲು ಪ್ರಯತ್ನಿಸಬೇಕು ಎಂದು ಬಿಐಇಟಿ ಮೆಕಾನಿಕಲ್ ವಿಭಾಗದ ಪ್ರೊ. ಕೆ.ಸದಾಶಿವಪ್ಪ ಕಿವಿಮಾತು ಹೇಳಿದರು.
ಸಮಯಕ್ಕೆ ಹೆಚ್ಚು ಒತ್ತು ನೀಡಿ, ಸಂಶೋಧನಾ ಮನೋಭಾವ ಮೈಗೂಡಿಸಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ವಸ್ತುಗಳ ಬೇಡಿಕೆ, ವಿನ್ಯಾಸ, ಉತ್ಪಾದನೆ, ಸಾರಿಗೆ, ಮಾರುಕಟ್ಟೆ ಮುಂತಾದ ವಿಷಯಗಳ ಬಗ್ಗೆ ವಿದ್ಯಾರ್ಥಿಗಳು ತಿಳಿದುಕೊಳ್ಳಲು ಅನುಕೂಲವಾಗುತ್ತದೆ.ಪ್ರತಿ ವರ್ಷ ಕಾರ್ಯಾಗಾರ ಆಯೋಜಿಸಲಾಗುತ್ತಿದ್ದು, ಇದು 20ನೇ ಕಾರ್ಯಾಗಾರ ಎಂದು ಕಾರ್ಯಕ್ರಮ ಆಯೋಜಕ ಡಾ.ಸಿ.ಎಂ. ಕಲ್ಲೇಶಪ್ಪ ತಿಳಿಸಿದರು.
ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಡಾ.ಜಿ.ಪಿ. ದೇಸಾಯಿ, ಡಾ.ಪ್ರವೀಣ್ ಕುಮಾರ್ ಡಿ.ಜಿ., ಸಂಕೇತ್ ಇದ್ದರು. ಶುಭಂ, ನಿಥಿ ಪ್ರಾರ್ಥಿಸಿದರು. ಚೈತ್ರಾ ಹಾಗೂ ಆಯ್ಕಾ ನಿರೂಪಿಸಿದರು. ಆಶಾ ವಂದಿಸಿದರು.