‘ಹುಟ್ಟಿದ ಒಂದೂವರೆ ವರ್ಷದ ಬಳಿಕ ಗಗನ್ಗೆ ಮಾತು ಬರುವುದಿಲ್ಲ ಹಾಗೂ ಕಿವಿ ಕೇಳುವುದಿಲ್ಲ ಎಂಬುದು ನಮ್ಮ ಗಮನಕ್ಕೆ ಬಂತು. ಚಿತ್ರದುರ್ಗದ ಕರ್ನಾಟಕ ಇ.ಎನ್.ಟಿ. ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಶ್ರವಣ ಯಂತ್ರ ಹಾಕಿದರೆ ಕೇಳಿಸಬಹುದು ಎಂದರು. ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದ ನಾವು ಸಾಲ ಮಾಡಿ ₹ 26 ಸಾವಿರ ವೆಚ್ಚದ ಶ್ರವಣ ಯಂತ್ರವನ್ನು ಹಾಕಿಸಿದೆವು. ಆದರೆ, ದೊಡ್ಡವನಾದರೂ ಸಮಸ್ಯೆ ನಿವಾರಣೆಯಾಗಲಿಲ್ಲ. ಮೈಸೂರಿನ ಮಾನಸ ಗಂಗೋತ್ರಿ ಆಸ್ಪತ್ರೆಗೆ ತೋರಿಸಿದಾಗ ಎರಡು ವರ್ಷ ಇಲ್ಲಿಯೇ ಇದ್ದು ಥೆರಪಿ ಮಾಡಿಸಬೇಕು ಎಂದರು. ಆದರೆ, ಅಲ್ಲಿಗೆ ತಂಗಿದ್ದು ಚಿಕಿತ್ಸೆ ಕೊಡಿಸಲು ನಮ್ಮಿಂದ ಸಾಧ್ಯವಾಗಲಿಲ್ಲ’ ಎಂದು ವೀರೇಶ್ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.