ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡೆ ಜೀವನದ ಭಾಗವಾಗಲಿ: ವಚನಾನಂದ ಸ್ವಾಮೀಜಿ

ರಾಜ್ಯಮಟ್ಟದ ವಾಸವಿ ಕ್ರೀಡಾಕೂಟಕ್ಕೆ ಚಾಲನೆ
Last Updated 25 ಮೇ 2019, 19:52 IST
ಅಕ್ಷರ ಗಾತ್ರ

ದಾವಣಗೆರೆ: ಕಬಡ್ಡಿ, ಫುಟ್‌ಬಾಲ್‌, ವಾಲಿಬಾಲ್‌, ಚೆಸ್‌, ಕ್ರಿಕೆಟ್‌ ಸೇರಿ ಹಲವು ಕ್ರೀಡೆಗಳು ಜೀವನದ ಒಂದು ಭಾಗವಾಗಲಿ ಎಂದು ಹರಿಹರದ ವೀರಶೈವ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಸಲಹೆ ನೀಡಿದರು.

ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾ ಹಾಗೂ ವಾಸವಿ ಯುವಜನ ಸಂಘದ ಆಶ್ರಯದಲ್ಲಿ ದಾವಣಗೆರೆ ನೇತಾಜಿ ಸುಭಾಷ್‌ಚಂದ್ರ ಭೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ವಾಸವಿ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸದಾಕಾಲ ಯುವಕರಂತೆ ಇರಬೇಕು ಎಂದರೆ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಮನುಷ್ಯ ಯಾವುದಾದರೂ ಶಾರೀರಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು. ನಡಿಗೆ, ಓಡುವುದು ಕನಿಷ್ಠ ಕೃಷಿ ಚಟುವಟಿಕೆಯನ್ನಾದರೂ ಕೈಗೊಳ್ಳಬೇಕು. ಶಾರೀರಿಕ ಶ್ರಮದಿಂದ ಸದಾಕಾಲ ಆರೋಗ್ಯವಾಗಿರಬಹುದು’ ಎಂದು ಹೇಳಿದರು.

‘ದಿನಕ್ಕೆ ಒಂದು ಗಂಟೆ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ 23 ಗಂಟೆ ಆರೋಗ್ಯವಾಗಿರಬಹುದು. ವಾಸವಿ ಸಂಘ ದೇಶದ ಎಲ್ಲಾ ಕಡೆಯಲ್ಲಿಯೂ ಕಾರ್ಯ ನಿರ್ವಹಿಸುತ್ತಿದೆ. ಜುಲೈ 5,6 ಹಾಗೂ 7 ರಂದು ಅಮೆರಿಕಾದ ಡೆಟ್ರಾಯಿಟ್‌ನಲ್ಲಿ ವಾಸವಿ ಜಯಂತಿ ನಡೆಯಲಿದ್ದು, ಅಲ್ಲಿ ನಾನು ಯೋಗ, ಧ್ಯಾನ ಹಾಗೂ ಸತ್ಸಂಗ ನಡೆಸಿಕೊಡುತ್ತೇನೆ’ ಎಂದು ಹೇಳಿದರು.

‘10 ವರ್ಷಗಳ ಹಿಂದೆ ಒಲಿಂಪಿಕ್ಸ್‌ನಲ್ಲಿ ಚೀನಾ 100 ಪದಕಗಳನ್ನು ತಂದರೆ ಭಾರತ 3 ಪದಕಗಳನ್ನು ತರುತ್ತಿತ್ತು. ಆದರೆ ಕಳೆದ 5 ವರ್ಷಗಳಲ್ಲಿ ಭಾರತವು ಉತ್ತಮ ಸಾಧನೆ ಮಾಡುತ್ತಿದೆ. ಕ್ರೀಡಾಪಟು ಒಬ್ಬರು ಸಚಿವರಾದ ಮೇಲೆ ಅವರು ಕ್ರೀಡೆಗೆ ಪ್ರೋತ್ಸಾಹ ನೀಡಿದ್ದರಿಂದ ಭಾರತದ ಕ್ರೀಡಾಪಟುಗಳು ಹೆಚ್ಚು ಪದಕಗಳನ್ನು ಪಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ಗಣನೀಯ ಸಾಧನೆ ಮಾಡಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಎನ್‌. ಶಬರೀಶ್‌ ಮಾತನಾಡಿ, ‘ಯುವಕರನ್ನು ಕ್ರೀಡೆಗೆ ಪರಿಚಯಿಸುವುದು ಆರ್ಯ ವೈಶ್ಯ ಯುವಜನ ಸಂಘದ ಉದ್ದೇಶವಾಗಿದ್ದು, ಈ ನಿಟ್ಟಿನಲ್ಲಿ ಕ್ರೀಡಾಕೂಟ ಆಯೋಜಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಯುವಕರಿಗೆ ವೇದಿಕೆ ಸಿಗುವುದು ಕಡಿಮೆಯಾಗುತ್ತಿದ್ದು, ಸಿಕ್ಕಿರುವ ವೇದಿಕೆಯನ್ನು ಬಳಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ನವೆಂಬರ್ 15ರಿಂದ 21ರವರೆಗೆ ಗುಜರಾತ್‌ನಲ್ಲಿ ಆರ್ಯ ವೈಶ್ಯ ಯುವಕ ಸಂಘದ ಏಕತಾ ಸಮಾವೇಶ ನಡೆಯಲಿದ್ದು, ಜಿಲ್ಲೆಯಿಂದ ಸಾವಿರಾರು ಮಂದಿ ಪಾಲ್ಗೊಳ್ಳಲಿದ್ದಾರೆ. ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

ಕನ್ನಿಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್‌.ಎಲ್‌. ಪ್ರಭಾಕರ್, ಕರ್ನಾಟಕ ಆರ್ಯವೈಶ್ಯ ಮಹಾಸಭಾ ದಾವಣಗೆರೆ ಜಿಲ್ಲಾ ಸಮಿತಿಯ ಅಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಸಾದ್‌, ಕನ್ನಿಕಾಪರಮೇಶ್ವರಿ ಕೊ–ಆಪರೇಟಿವ್‌ ಬ್ಯಾಂಕ್‌ನ ಆರ್‌.ಜಿ. ಶ್ರೀನಿವಾಸಮೂರ್ತಿ, ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ಮಾಜಿ ಅಧ್ಯಕ್ಷರಾದ ಡಿ.ವಿ. ಸತ್ಯನಾರಾಯಣ, ಎಸ್‌. ಟಿ.ವಿಜೇಂದ್ರ, ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ನಿಕಟಪೂರ್ವ ಅಧ್ಯಕ್ಷ ಜಿ.ಬಿ. ಕೋಟೇಶ್‌, ಬಿ. ಎಸ್‌. ಶಿವಾನಂದ, ಬಿ.ಎನ್. ಸಾಯಿಪ್ರಕಾಶ್‌, ಎಸ್‌. ಸುನೀಲ್, ಎಸ್‌. ಎಸ್‌.ನರೇಶ್, ಜಗತ್ ಎಸ್‌.ಕಂಬಂ, ಆರ್‌.ಎನ್. ಅಜಿತ್‌ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT