ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಆನಂದ್, ಭೀಮಾನಾಯ್ಕ ವಿರುದ್ಧ ಪ್ರಕರಣ

ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಸಾಗಿಸುತ್ತಿದ್ದ 1,087 ಕುಕ್ಕರ್ ವಶ
Last Updated 31 ಮಾರ್ಚ್ 2018, 6:25 IST
ಅಕ್ಷರ ಗಾತ್ರ

ಹೊಸಪೇಟೆ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ, ಕಾಂಗ್ರೆಸ್‌ ಮುಖಂಡರಾದ ಆನಂದ್ ಸಿಂಗ್‌, ಎಸ್.ಭೀಮಾನಾಯ್ಕ ವಿರುದ್ಧ ಶುಕ್ರವಾರ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಇಲ್ಲಿನ ಅನಂತಶಯನಗುಡಿ ಬಸ್ ತಂಗುದಾಣದಲ್ಲಿ ಆನಂದ್ ಸಿಂಗ್ ಅವರ ಭಾವಚಿತ್ರದ ಫ್ಲೆಕ್ಸ್‌ ಹಾಗೂ ತಾಲ್ಲೂಕಿನ ಕಲ್ಲಹಳ್ಳಿಯಲ್ಲಿ ಭೀಮಾನಾಯ್ಕ ಭಾವಚಿತ್ರದ ಫ್ಲೆಕ್ಸ್ ಅಳವಡಿಸಲಾಗಿತ್ತು. ಈ ಬಗ್ಗೆ ಚುನಾವಣೆ ನೀತಿ ಸಂಹಿತೆಯ ಸಂಚಾರಿ ದಳದ ಅಧಿಕಾರಿ ಶಾಂತಕುಮಾರ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಕ್ಕರ್‌ ವಶಕ್ಕೆ

ಹುಬ್ಬಳ್ಳಿ: ಯಾವುದೇ ದಾಖಲೆ ಇಲ್ಲದೆ, ಹುಬ್ಬಳ್ಳಿಯಿಂದ ಕೊಪ್ಪಳಕ್ಕೆ ಎರಡು ವಾಹನಗಳಲ್ಲಿ ಸಾಗಿಸುತ್ತಿದ್ದ 1,087 ಪ್ರೆಸ್ಟೀಜ್‌ ಕುಕ್ಕರ್‌ಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಶುಕ್ರವಾರ ವಶಪಡಿಸಿಕೊಂಡಿದ್ದಾರೆ.ಇಲ್ಲಿನ ಗದಗ ರಸ್ತೆಯ ಪೊಲೀಸ್‌ ಚೆಕ್ ಪೋಸ್ಟ್‌ನಲ್ಲಿ ಒಂದು ಲಾರಿ  ಮತ್ತು ಒಂದು ಟಾಟಾ ಏಸ್‌ ವಾಹನವನ್ನು ತಡೆದ ಪೊಲೀಸ್‌ ಇನ್‌ಸ್ಪೆಕ್ಟರ್‌ ಬಿ.ಆರ್‌.ಗಡ್ಡೇಕರ್‌ ಮತ್ತು ಸಿಬ್ಬಂದಿ, ತಪಾಸಣೆ ಮಾಡಿದಾಗ ಅನಧಿಕೃತವಾಗಿ ಕುಕ್ಕರ್‌ಗಳನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ.ವಶಪಡಿಸಿಕೊಂಡಿರುವ ಕುಕ್ಕರ್‌ ಗಳ ಮೌಲ್ಯ ₹ 28 ಲಕ್ಷ ಎಂದು ಅಂದಾಜಿಸಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾಹನ ಚಾಲಕರಾದ ಕುಂದಗೋಳ ತಾಲ್ಲೂಕಿನ ಕೂಬಿಹಾಳದ ಪ್ರಕಾಶ ಮಂಟೂರ ಮತ್ತು ಕಲಘಟಗಿ ತಾಲ್ಲೂಕಿನ ಬಸಲಿಂಗನಕೊಪ್ಪದ ಚನ್ನಪ್ಪಗೌಡ ಪಾಟೀಲ ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.ಪೊಲೀಸ್‌ ಕಮಿಷನರ್‌ ಎಂ.ಎನ್‌.ನಾಗರಾಜ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸರಿಗೆ ₹ 10 ಸಾವಿರ ನಗದು ಬಹುಮಾನ ಘೋಷಿಸಿದ್ದಾರೆ.₹2.56 ಲಕ್ಷ ವಶಕ್ಕೆ

ಯಲ್ಲಾಪುರ (ಉತ್ತರ ಕನ್ನಡ): ದಾಖಲೆಗಳಿಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ ₹ 2.56 ಲಕ್ಷ ನಗದನ್ನು ಯಲ್ಲಾಪುರ ಪೊಲೀಸರು, ತಾಲ್ಲೂಕಿನ ಕಿರವತ್ತಿ ಚೆಕ್ ಪೋಸ್ಟ್ ಬಳಿ ಶುಕ್ರವಾರ ವಶಪಡಿಸಿಕೊಂಡಿದ್ದಾರೆ.

ಹಡಗಲಿಯಲ್ಲಿ ಅಕ್ರಮ ಮದ್ಯ ವಶ

ಹೂವಿನಹಡಗಲಿ: ತಾಲ್ಲೂಕಿನ ಮೂರು ಕಡೆಗಳಲ್ಲಿ ಗುರುವಾರ ರಾತ್ರಿ ತಹಶೀಲ್ದಾರ್‌ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದಾರೆ.ತಾಲ್ಲೂಕಿನ ಸೋವೇನಹಳ್ಳಿ ತಾಂಡಾದಲ್ಲಿ ಕಾಶಿನಾಥ ಎಂಬುವರಿಗೆ ಸೇರಿದ ಕಿರಾಣಿ ಅಂಗಡಿ, ಮುದ್ಲಾಪುರ ಹೊಸ ತಾಂಡಾದಲ್ಲಿ ಕುಬೇಂದ್ರ ನಾಯ್ಕ ಎಂಬುವವರ ಅಂಗಡಿಯ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಅಕ್ರಮವಾಗಿ ಸಂಗ್ರಹಿಸಿಟ್ಟದ್ದ ₹13,270 ಮೌಲ್ಯದ 36.36 ಲೀಟರ್‌ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ. ತಿಪ್ಪಾಪುರ ಗ್ರಾಮದಲ್ಲಿ ಎಚ್.ವಿಜಯಕುಮಾರ್ ಅಕ್ರಮವಾಗಿ ಸಂಗ್ರಹಿಸಿದ್ದ 0.54 ಲೀಟರ್‌ ಮದ್ಯವನ್ನು ವಶಪಡಿಸಿಕೊಂಡು ಅಬಕಾರಿ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದಾರೆ.

ಆರೋಪಿಗಳಾದ ಕುಬೇಂದ್ರ ನಾಯ್ಕ, ವಿಜಯಕುಮಾರ್ ಅವರನ್ನು ಬಂಧಿಸಿ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದು, ಕಾಶಿನಾಥ ತಲೆಮರೆಸಿಕೊಂಡಿದ್ದಾನೆ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಹಶೀಲ್ದಾರ್ ಮೇಘರಾಜ ನಾಯಕ, ಅಬಕಾರಿ ಉಪ ನಿರೀಕ್ಷಕಿ ನೇತ್ರಾ ಉಪ್ಪಾರ್, ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT