ಹೊನ್ನಾಳಿ: ‘ಮಾಜಿ ಶಾಸಕ ಡಿ.ಜಿ. ಶಾಂತನಗೌಡರು ನನ್ನ ಮೇಲೆ ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಪರಿಹಾರ ಹಂಚಿಕೆಯಲ್ಲಿ ತಾರತಮ್ಯ ಮಾಡಿದ್ದೇನೆ ಎಂದು ಸಾಬೀತುಪಡಿಸಿದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ’ ಎಂದು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಸವಾಲುಹಾಕಿದರು.
ಬುಧವಾರ ತಾಲ್ಲೂಕಿನ ಹೊಸ ದೇವರಹೊನ್ನಾಳಿ, ಹಳೇ ದೇವರಹೊನ್ನಾಳಿ, ತಕ್ಕನಹಳ್ಳಿ, ಕಮ್ಮಾರಗಟ್ಟೆ, ಕಮ್ಮಾರಗಟ್ಟೆ ತಾಂಡಾ, ಘಂಟ್ಯಾಪುರ ಗ್ರಾಮಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಮಳೆಹಾನಿ ಪರಿಶೀಲನೆ ನಡೆಸಿ, ಸುದ್ದಿಗಾರರೊಂದಿಗೆ ಮಾತನಾಡಿದರು.
‘ಪಕ್ಷಪಾತ ಮಾಡದೆ, ಜಾತಿ, ಧರ್ಮ ನೋಡದೆ, ಎಲ್ಲಾ ಸಮುದಾಯದವರ ಮನೆಗಳಿಗೆ ಭೇಟಿ ನೀಡಿ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿದ್ದೇನೆ. ಸಂತ್ರಸ್ತರುಯಾವುದೇ ಪಕ್ಷದವರಾದರೂ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದರು.
‘ನಾನು ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡಿಲ್ಲ. ಪಕ್ಷ ಭೇದ ಮಾಡಿದ್ದರೆ ಚರ್ಚೆಗೆ ಬರಲಿ’ ಎಂದು ಸವಾಲು ಹಾಕಿದರು.
ಮುಖಂಡ ಸುರೇಂದ್ರನಾಯ್ಕ, ತಾಂಡಾ ಅಭಿವೃದ್ಧಿ ನಿಗಮದ ನಿರ್ದೇಶಕ ಮಾರುತಿ ನಾಯ್ಕ ಇದ್ದರು.