510 ಎಕರೆಗೂ ಹೆಚ್ಚು ವಿಶಾಲವಾಗಿರುವ ಐತಿಹಾಸಿಕ ಕೆರೆ ಪಟ್ಟಣಕ್ಕೆ ಹೊಂದಿಕೊಂಡಂತಿದೆ. ಕೆರೆಗೆ ನೀರು ಹರಿದುಬರುವ ಕಾಲುವೆಗಳ ಒತ್ತುವರಿಯಿಂದ ಸುಮಾರು ಎರಡು ದಶಕಗಳಿಂದ ಕೆರೆ ಭರ್ತಿಯಾಗದೇ ಖಾಲಿಯಾಗಿದೆ. ಕೆರೆ ಖಾಲಿಯಾಗಿರುವುದನ್ನು ಬಂಡವಾಳ ಮಾಡಿಕೊಂಡಿರುವ ಮಣ್ಣು ಲೂಟಿಕೋರರು ಕೆರೆಯೊಳಗೆ ಬೇಕಾಬಿಟ್ಟಿಯಾಗಿ ಜೆಸಿಬಿ ಯಂತ್ರಗಳಿಂದ ವ್ಯಾಪಕವಾಗಿ ಮಣ್ಣು ತೆಗೆದು ವಿವಿಧ ಕಾಮಗಾರಿಗಳಿಗೆ ಹಾಗೂ ಇಟ್ಟಿಗೆ ಭಟ್ಟಿ ನಿರ್ಮಾಣಕ್ಕೆ ಅಕ್ರಮವಾಗಿ ಬಳಸುತ್ತಿದ್ದಾರೆ. ಮಣ್ಣು ತೆಗೆದ ಸ್ಥಳದಲ್ಲಿ ನಿರ್ಮಾಣವಾಗಿರುವ ಆಳವಾದ ದೈತ್ಯ ಗುಂಡಿಗಳಲ್ಲಿ ಮಳೆ ನೀರು ತುಂಬಿಕೊಂಡಿದ್ದು, ಶನಿವಾರ ಮೂರು ಮಕ್ಕಳ ಈಜಲು ತೆರಳಿದಾಗ ಮುಳುಗಿ ಸಾವನ್ನಪ್ಪಿದ್ದಾರೆ.