ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವು ಮುಕ್ತ ದೇಶಕ್ಕೆ ಪಾರಂಪರಿಕ ಪದ್ಧತಿಯೇ ಪರಿಹಾರ

Last Updated 17 ಅಕ್ಟೋಬರ್ 2019, 6:13 IST
ಅಕ್ಷರ ಗಾತ್ರ

ದಾವಣಗೆರೆ: ದೇಶದಲ್ಲಿರುವ ಅಪೌಷ್ಟಿಕತೆ ಮತ್ತು ಹಸಿವು ನಿವಾರಣೆಗೆ ಸತ್ವಯುತ, ಪೌಷ್ಟಿಕಾಂಶಗಳನ್ನು ಒಳಗೊಂಡ ಪಾರಂಪರಿಕ ಆಹಾರ ಪದ್ಧತಿಯೊಂದೇ ಶಾಶ್ವತ ಪರಿಹಾರ ಎಂದು ಮೈಸೂರಿನ ಸಿಎಸ್‍ಐಆರ್- ಸಿಎಫ್‍ಟಿಆರ್‌ಐನ ಹಿರಿಯ ಪ್ರಧಾನ ವಿಜ್ಞಾನಿ ಡಾ. ಅನು ಅಪ್ಪಯ್ಯ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾಲಯದ ಆಹಾರ ತಂತ್ರಜ್ಞಾನ ವಿಭಾಗದ ವತಿಯಿಂದ ವಿ.ವಿ ಆವರಣದ ಎಂ.ಬಿ.ಎ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಆಹಾರ ದಿನಾಚರಣೆ ಮತ್ತು ಆಹಾರ ತಂತ್ರಜ್ಞಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ‘ಹಸಿವು ಮತ್ತು ಅಪೌಷ್ಟಿಕತೆಯು ದೇಶವನ್ನು ತೀವ್ರವಾಗಿ ಕಾಡುವ ದೊಡ್ಡ ಸಮಸ್ಯೆಗಳಾಗಿವೆ. ಆದರೆ ಸ್ಥಳೀಯ ಸಂಪನ್ಮೂಲವನ್ನು ಸದ್ಬಳಕೆ ಮಾಡಿಕೊಳ್ಳದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣ’ ಎಂದು ಹೇಳಿದರು.

ನಮ್ಮ ಪಾರಂಪರಿಕ ಆಹಾರ ಪದ್ಧತಿಯು ಆರೋಗ್ಯ ವಿಜ್ಞಾನದ ಮೂಲ ತತ್ವವಾಗಿದೆ. ಈ ಆಹಾರ ಪದ್ಧತಿಯಲ್ಲಿ ಸ್ಥಳೀಯವಾಗಿ ಲಭ್ಯವಿರುವ ಸೊಪ್ಪು, ತರಕಾರಿ, ಕಾಳು ಹಾಗೂ ಇತರ ಬೆಳೆಗಳಲ್ಲಿರುವ ಪೌಷ್ಟಿಕಾಂಶಗಳು ಮೌಲ್ಯವರ್ಧನೆಗೆ ಸಹಕಾರಿ ಆಗಿದ್ದವು. ಅವುಗಳನ್ನು ಬಳಸುತ್ತಿದ್ದ ಗ್ರಾಮೀಣ ಭಾಗದ ಜನರು ಆರೋಗ್ಯ ಪೂರ್ಣ ಜೀವನ ನಡೆಸುತ್ತಿದ್ದರು. ಆದರೆ ಆಧುನಿಕತೆ ಪ್ರಭಾವ, ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯಿಂದ ಫಾಸ್ಟ್ ಫುಡ್ ವ್ಯಾಮೋಹ ಹೆಚ್ಚಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

‘ದೇಶದಲ್ಲಿ ಅಪೌಷ್ಟಿಕತೆ ಮತ್ತು ಹಸಿವು ನಿವಾರಣೆ ಮಾಡಿ ಮಕ್ಕಳಲ್ಲಿ ಶೈಕ್ಷಣಿಕ ಉನ್ನತಿಯ ಉದ್ದೇಶದಿಂದ ಸರ್ಕಾರ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಜಾರಿಗೆ ತಂದಿದೆ. ಇದರಲ್ಲಿ ಪ್ರತಿ ವಿದ್ಯಾರ್ಥಿಗೆ ಕನಿಷ್ಠ 500 ಕಿಲೋ ಕ್ಯಾಲೊರಿಯಷ್ಟು ಪೌಷ್ಟಿಕಾಂಶ ಒದಗಿಸಬೇಕು. ಆದರೆ ಈಗ ನೀಡುತ್ತಿರುವ ಅನುದಾನದಲ್ಲಿ ಪ್ರತಿ ವಿದ್ಯಾರ್ಥಿಗೆ 500 ಕ್ಯಾಲೊರಿಯಷ್ಟೂ ಪೋಷಕಾಂಶ ಸಿಗುತ್ತಿಲ್ಲ’ ಎಂದು ವಿಷಾದಿಸಿದರು.

‘ಈ ಪೋಷಕಾಂಶದಿಂದ ಆರೋಗ್ಯವೃದ್ಧಿ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಕಡಿಮೆ ಖರ್ಚಿನಲ್ಲಿ ಹೆಚ್ಚು ಪೋಷಕಾಂಶ ಒದಗಿಸುವ ಆಹಾರವನ್ನು ಸಂಶೋಧಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಯುವ ವಿಜ್ಞಾನಿಗಳು ಆಧುನಿಕ ತಂತ್ರಜ್ಞಾನಗಳ ನೆರವಿನೊಂದಿಗೆ ಪೌಷ್ಟಿಕ ಆಹಾರ ಮತ್ತು ಪೋಷಕಾಂಶಗಳ ಸಂಶೋಧನೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ದಾವಣಗೆರೆ ವಿವಿ ಕುಲಸಚಿವ ಪ್ರೊ. ಬಸವರಾಜ ಬಣಕಾರ ಮಾತನಾಡಿ, ‘ಆಹಾರ ಪ್ರತಿಯೊಬ್ಬರ ಹಕ್ಕು. ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಹಸಿವಿನಿಂದ ಬಳಲುವ ಪರಿಸ್ಥಿತಿ ಇರಬಾರದು. ಇದು ಆ ದೇಶದ ದಾರಿದ್ರ್ಯವನ್ನು ತೋರುತ್ತದೆ. ಆ ಕಾರಣಕ್ಕಾಗಿಯೇ ಎಲ್ಲ ದೇಶಗಳು ಆಹಾರ ಸಂರಕ್ಷಣೆ, ಪೂರೈಕೆಗೆ ಆದ್ಯತೆ ನೀಡುತ್ತಿವೆ’ ಎಂದು ತಿಳಿಸಿದರು.

‘ದೇಶದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಹಾರ ಇದ್ದರೂ ಸಮರ್ಪಕ ನಿರ್ವಹಣೆ ಇಲ್ಲದೆ ವ್ಯರ್ಥವಾಗುತ್ತಿದೆ. ಊಟ ಮಾಡುವಾಗ ತಟ್ಟೆಯಲ್ಲಿ ಬಿಟ್ಟು ಅನಗತ್ಯವಾಗಿ ವ್ಯರ್ಥ ಮಾಡುವ ಪ್ರವೃತ್ತಿ ಮೊದಲು ನಿಲ್ಲಬೇಕು. ಈ ಆಹಾರ ಜಾಗೃತಿ ಪ್ರತಿಯೊಬ್ಬರ ಮನೆ, ಮನದಿಂದಲೇ ಆರಂಭವಾಗಬೇಕು. ಜನರಿಗೆ ಆಹಾರದ ಮಹತ್ವದ ಅರಿವು ಮೂಡಿಸಲು ವಿದ್ಯಾರ್ಥಿಗಳು ಆಂದೋಲನದ ರೀತಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು’ ಎಂದು ಸೂಚಿಸಿದರು.

ಬೆಂಗಳೂರಿನ ಗಾರ್ಡನ್ ಸಿಟಿ ವಿಶ್ವವಿದ್ಯಾನಿಲಯದ ಸಹ ಪ್ರಾಧ್ಯಾಪಕ ಡಾ.ಎಚ್.ಆರ್. ಭಾರ್ಗವ್, ಪ್ರೊ. ಶಿಶುಪಾಲ, ಸಿಂಡಿಕೇಟ್ ಸದಸ್ಯ ಜನಪ್ರಕಾಶ್ ಕೊಂಡಜ್ಜಿ ಉಪಸ್ಥಿತರಿದ್ದರು. ಆಹಾರ ತಂತ್ರಜ್ಞಾನ ವಿಭಾಗದ ಅಧ್ಯಕ್ಷ ಪ್ರೊ ಎಚ್.ಎಸ್. ರವಿಕುಮಾರ ಪಾಟೀಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು ಡಾ. ಜೆ. ಶಂಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT