ದಾವಣಗೆರೆ: ಸಮಯ ಪ್ರಜ್ಞೆಯಿಂದ ಬಿಎಸ್ಎಫ್ ಮಾಜಿ ಯೋಧರ ಮಗುವನ್ನು ರಕ್ಷಿಸಿ, ಮನೆ ತಲುಪಿಸಿದ ಕೆಎಸ್ಆರ್ಟಿಸಿ ದಾವಣಗೆರೆ ಘಟಕದ ನಿರ್ವಾಹಕ ಕೇಶವಮೂರ್ತಿ, ಚಾಲಕ ರವೀಂದ್ರ ಅವರನ್ನು ಜಿಲ್ಲಾ ಪ್ಯಾರ ಮಿಲಿಟರಿ ಕ್ಷೇಮಾಭಿವೃದ್ಧಿ ಸೊಸೈಟಿ ವತಿಯಿಂದ ಸನ್ಮಾನಿಸಲಾಯಿತು.
ಮಾಜಿ ಯೋಧ ಮಹಮದ್ ರಫೀ ಅವರ 12 ವರ್ಷದ ಮಗು ಮನೆಯಿಂದ ತಪ್ಪಿಸಿಕೊಂಡು ಬೆಂಗಳೂರಿನ ಮೆಜೆಸ್ಟಿಕ್ ತಲುಪಿತ್ತು. ಈ ಮಗುವನ್ನು ಕಂಡ ಕೇಶವಮೂರ್ತಿ ಮತ್ತು ರವಿಂದ್ರ ಅವರು ಮಗುವನ್ನು ವಶಕ್ಕೆ ತೆಗೆದುಕೊಂಡು ಹೆತ್ತವರಿಗೆ ಒಪ್ಪಿಸಿದ್ದರು. ಅವರ ಸೇವಾ ಮನೋಭಾವ ಮತ್ತು ಕರ್ತವ್ಯ ನಿಷ್ಠೆಗಾಗಿ ಕೆಎಸ್ಆರ್ಟಿಸಿ ಘಟಕದ ಡಿಸಿ ಮತ್ತು ವ್ಯವಸ್ಥಾಪಕರ ಸಮ್ಮುಖದಲ್ಲಿ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಮಂಜಾನಾಯ್ಕ, ಕಾರ್ಯದರ್ಶಿ ಆರ್.ವಿ. ಪ್ರವೀಣ್, ಬಿ.ಕೆ. ಚಂದ್ರಶೇಖರ್, ಟಿ. ಜಯಣ್ಣ, ನಿರಂಜನ್ ಮತ್ತಿತರರು ಉಪಸ್ಥಿತರಿದ್ದರು.