ತ್ಯಾವಣಿಗೆ: ತ್ಯಾವಣಿಗೆಯಲ್ಲಿ ಬಿಸಿಲ ಝಳ ಅಧಿಕವಾಗಿದ್ದು, ನಾಗರಿಕರನ್ನು ಹೈರಾಣಾಗಿಸಿದೆ. ಇದರ ಪರಿಣಾಮ ತಂಪು ಪಾನೀಯಕ್ಕೆ ಬೇಡಿಕೆ ಹೆಚ್ಚಿದೆ.
ಕಳೆದ ಕೆಲ ದಿನಗಳಿಂದ ಉಷ್ಣಾಂಶ ಒಂದೇ ಸಮನೆ ಏರುಗತಿಯಲ್ಲಿ ಸಾಗುತ್ತಿದೆ. ಬಳ್ಳಾರಿ, ಬೀದರ್, ಕಲಬುರ್ಗಿ, ರಾಯಚೂರಿನಂತೆ ಹೆಚ್ಚಿನ ಉಷ್ಣಾಂಶ ದಾಖಲಾಗಿದ್ದು, ಜನರನ್ನು ಕಂಗೆಡಿಸಿದೆ.
ಗಾಯದ ಮೇಲೆ ಉಪ್ಪು ಸವರಿದಂತೆ ನಿರಂತರವಾಗಿ ವಿದ್ಯುತ್ ಕಡಿತಗೊಳಿಸುವುದರಿಂದ ಫ್ಯಾನ್, ಎಸಿಗಳಿದ್ದರೂ ಉಪಯೋಗಕ್ಕೆ ಬಾರದಂತಾಗಿವೆ.
ಬೆಳಗಿನ ಬಿಸಿಲೇ ನೆತ್ತಿ ಸುಡುತ್ತಿದೆ. ಮಧ್ಯಾಹ್ನದ ವೇಳೆಗೆ ಮನೆಯಿಂದ ಹೊರಕ್ಕೆ ಕಾಲಿಡಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಮಳೆ ಇನ್ನೂ ಒಂದು ತಿಂಗಳು ತಡವಾಗಿ ಬರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮುಂದೆ ಎಂತಹ ಸ್ಥಿತಿ ಎದುರಾಗಬಹುದೋ ಎಂಬ ಭೀತಿ ಆವರಿಸಿದೆ.
ತಂಪು ಪಾನೀಯಕ್ಕೆ ಬೇಡಿಕೆ: ಬಿಸಿಲಿನ ತಾಪ ತಡೆದುಕೊಳ್ಳಲಾರದೆ ನಾಗರಿಕರು ತಂಪು ಪಾನೀಯಗಳಾದ ಎಳನೀರು, ಕಬ್ಬಿನ ಹಾಲು, ಮೋಸುಂಬೆ ಹಣ್ಣಿನ ರಸ ಸೇರಿದಂತೆ ವಿವಿಧ ಪಾನೀಯಗಳ ಮೊರೆ ಹೋಗಿದ್ದಾರೆ. ತಂಪು ಪಾನೀಯಗಳ ಜತೆ ಸೌತೆಕಾಯಿ, ಕಲ್ಲಂಗಡಿ ಹಣ್ಣುಗಳ ವ್ಯಾಪಾರವೂ ಹೆಚ್ಚಾಗಿದೆ.
ಮರಗಳ ಮಾರಣ ಹೋಮ: ರಾಷ್ಟ್ರೀಯ ಹೆದ್ದಾರಿ 65ರಲ್ಲಿ ತ್ಯಾವಣಿಗೆಯಲ್ಲಿ ರಸ್ತೆ ಅಗಲೀಕರಣ ನಡೆಯುತ್ತಿದೆ. ರಸ್ತೆ ಬದಿಯಲ್ಲಿ ಇರುವಂತಹ ನೂರಾರು ಮರಗಳು ನಾಶವಾಗಿವೆ. ಬೃಹದಾಕಾರದ ಮರಗಳ ಮಾರಣ ಹೋಮದಿಂದಾಗಿ ಬಿಸಿಲ ಝಳ ಹೆಚ್ಚಿದ್ದು, ನಾಗರಿಕರು ಓಡಾಡಲು ಪರಿತಪಿಸುವಂತಾಗಿದೆ.