ದಾವಣಗೆರೆ: ಮನದ ಮೈಲಿಗೆಯನ್ನು ತೊಳೆಯಲು ಸುಜ್ಞಾನ ಬೇಕು. ಮಹಾತ್ಮರ, ಶರಣರ ನುಡಿಗಳಿಂದ ಸುಜ್ಞಾನ ದೊರಕುತ್ತದೆ. ಸುಜ್ಞಾನದಿಂದ ಬದುಕು ಶ್ರೇಷ್ಠವಾಗುತ್ತದೆ ಎಂದು ವಿರಕ್ತ ಮಠದ ಬಸವಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಬಸವಕೇಂದ್ರದಿಂದ ಶುಕ್ರವಾರ ನಡೆದ ‘ದಿವ್ಯಪಥ ಲೋಕಹಿತ’ ಪ್ರವಚನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ಯಾವಾಗಲೂ ಒಳ್ಳೆಯ ವಿಚಾರಗಳನ್ನು ಕೇಳಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ಮುರುಘಾ ಶರಣರು ರಚಿಸಿರುವ ಅಥಣಿ ಶಿವಯೋಗಿಗಳ ಕುರಿತು ‘ದಿವ್ಯಪಥ ಲೋಕಹಿತ’ ಕೃತಿಯ ಪ್ರವಚನ ಒಂದು ತಿಂಗಳ ಕಾಲ ನಡೆಯಲಿದ್ದು, ಶ್ರಾವಣ ಮಾಸದಲ್ಲಿ ಶ್ರವಣ ಮಾಡುವ ಪದ್ಧತಿಯನ್ನು ಪ್ರಾರಂಭಿಸಿದ ಮೊದಲ ಮಠ ದಾವಣಗೆರೆಯ ವಿರಕ್ತಮಠವಾಗಿದೆ’ ಎಂದರು.
‘ಅಥಣಿ ಶಿವಯೋಗಿಗಳು ನಾಡಿನ ದೊಡ್ಡ ಮಹಾತ್ಮರು. ಅವರ ಜೀವನ ದಿವ್ಯಪಥ ಅಂದರೆ ಆಧ್ಯಾತ್ಮ ಪಥ , ಧಾರ್ಮಿಕ ಪಥ, ಯೋಗಪಥ, ಧ್ಯಾನಪಥದಿಂದ ದಿವ್ಯತೆ ಭವ್ಯತೆ ಪಡೆದು ಶಿವಯೋಗಿಗಳಾಗಿದ್ದಾರೆ. ಬಸವತತ್ವವನ್ನು ಭೋದಿಸದೆ ಬದುಕಿನಲ್ಲಿ ಅನುಷ್ಠಾನ ಮಾಡಿ ತೋರಿಸಿದ ಮಹಾತ್ಮರಾಗಿದ್ದಾರೆ’ ಎಂದು ಶ್ಲಾಘಿಸಿದರು.
ಬ್ಯಾಡಗಿ ತಾಲ್ಲೂಕಿನ ಕಲ್ಲೇದೇವರ ಕುಮಾರಶಾಸ್ತ್ರೀ ಹಿರೇಮಠ, ಬಿಜೆಪಿ ಮುಖಂಡರಾದ ಯಶವಂತರಾವ್ ಜಾಧವ್ , ಲೋಕಿಕೆರೆ ನಾಗರಾಜ್ ಅವರು ‘ದಿವ್ಯಪಥ ಲೋಕಹಿತ’ ಗ್ರಂಥಕ್ಕೆ ಪುಷ್ಪಾರ್ಚನೆ ಮಾಡಿದರು.