ದಾವಣಗೆರೆ: ಪ್ರತಿ ವ್ಯಕ್ತಿಯ ತುಡಿತಕ್ಕೆ ಧ್ವನಿಯಾಗುವುದೇ ‘ಇಂತಿ ನಮಸ್ಕಾರಗಳು’ ಕೃತಿಯ ಹೆಚ್ಚುಗಾರಿಕೆ ಎಂದು ವಿಮರ್ಶಕ, ಸಾಹಿತಿ ಡಾ. ಲೋಕೇಶ್ ಅಗಸನಕಟ್ಟೆ ಹೇಳಿದರು.
ಕವಿ, ನಾಟಕಕಾರ ಪ್ರಕಾಶ್ ಕೊಡಗನೂರ್ ಅವರ ಇಂತಿ ನಮಸ್ಕಾರಗಳು ಕೃತಿಯನ್ನು ರೋಟರಿ ಬಾಲಭವನದಲ್ಲಿ ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಒಡಲಾಳದ ಸಂಕಟಗಳಿಗೆ, ಬದುಕಲ್ಲಿ ಎದುರಾಗುವ ಹಲವು ಪ್ರಶ್ನೆಗಳಿಗೆ ಉತ್ತರ ಇರುವುದಿಲ್ಲ. ಉತ್ತರ ಕಂಡುಕೊಳ್ಳಲು ಮಾಡುವ ಹುಡುಕಾಟ ಈ ಕವಿತೆಗಳಲ್ಲಿ ಇದೆ. ಪ್ರೀತಿ ದೊಡ್ಡದೋ, ಬದುಕು ದೊಡ್ಡದೋ ಅಥವಾ ಬದುಕನ್ನು ಪ್ರೀತಿಸುವುದು ದೊಡ್ಡದೋ ಎಂಬ ಪ್ರಶ್ನೆಗಳು ಇಲ್ಲಿ ಮೂಡುತ್ತವೆ ಎಂದು ವಿವರಿಸಿದರು.
ಸಂಸ್ಕೃತಿ ಚಿಂತಕ ಡಾ. ಸಿರಾಜ್ ಅಹಮದ್ ಮಾತನಾಡಿ, ‘ಕವಿತೆಗಳಿಗೆ, ಪ್ರೀತಿಗೆ ಕೊನೆಯಿಲ್ಲ. ‘ಇಂತಿ ನಮಸ್ಕಾರಗಳು’ ಎಂದು ಬರವಣಿಗೆ ಇಲ್ಲಿಗೇ ನಿಲ್ಲಬಾರದು’ ಎಂದರು.
‘ಸಾಮಾಜಿಕ ಮೌಲ್ಯಗಳು, ಕಟ್ಟುಪಾಡುಗಳ ಬಗೆಗೆ ಗಂಭೀರ ಪ್ರಶ್ನೆಗಳನ್ನು ಲೇಖಕರು ಎತ್ತುತ್ತಾರೆ. ದೇಹದ ವಾಂಛೆಗಳನ್ನು ಮೀರಿ ಪ್ರೇಮದ ಬಗ್ಗೆ, ಮೋಹದ ಬಗ್ಗೆ ಚಿಂತಿಸುವ ಪ್ರಕಾಶ್ ಅವರ ಆರಾಧ್ಯ ದೈವವಾಗಿರುವ ಯೇಟ್ಸ್ನಂತೆ ಪ್ರಕಾಶ್ ಕೊಡಗನೂರ್ ಕೂಡ ರೂಪಕಗಳನ್ನು ಸೃಷ್ಟಿ ಮಾಡುವುದರ ಕಡೆಗೆ ಯೋಚಿಸಬೇಕು ಎಂದು ಸಲಹೆ ನೀಡಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಎಂ.ಆರ್. ಯೋಗೇಶ್ವರಯ್ಯ, ಕೃತಿಕಾರ ಪ್ರಕಾಶ್ ಕೊಡಗನೂರ್, ಲೋಕಣ್ಣ, ಚನ್ನೇಶ್ ಹೊನ್ನಾಳಿ, ಶರಣಪ್ಪ ಎಂ.ಟಿ., ನಾಗರಾಜ್ ಅವರೂ ಇದ್ದರು.