ಧಾರವಾಡ: ‘ಕಥಿ ಕೇಳೂಣ ಬರ್ರಿ’ ಎಂಬ ಬಾನುಲಿ ಸರಣಿ ಕಾರ್ಯಕ್ರಮದ ಮೂಲಕ ಧಾರವಾಡ ಆಕಾಶವಾಣಿ 25 ಕಂತುಗಳಲ್ಲಿ ಆಯ್ದ ಲೇಖಕರ ಆಸಕ್ತಿ ಮೂಡಿಸುವ ಕಥೆಗಳನ್ನು ಯಶಸ್ವಿಯಾಗಿ ಬಿತ್ತರಿಸಿದೆ.
ಮಾಸ್ತಿ ಅವರಿಂದ ಆರಂಭಗೊಂಡ ಕಾರ್ಯಕ್ರಮದಲ್ಲಿ ಕುವೆಂಪು, ಆನಂದಕಂದ, ಬಸವರಾಜ ಕಟ್ಟೀಮನಿ, ಯು.ಆರ್.ಅನಂತಮೂರ್ತಿ, ದೇವನೂರು ಮಹಾದೇವ, ಪಿ.ಲಂಕೇಶ್, ವೈದೇಹಿ, ಯಶವಂತ ಚಿತ್ತಾಲ, ಮಾಲತಿ ಪಟ್ಟಣಶೆಟ್ಟಿ, ವಿನಯಾ, ಸುನಂದಾ ಕಡಮೆ, ಮೊಗಳ್ಳಿ ಗಣೇಶ್, ಅಮರೇಶ ನುಗಡೋಣಿ, ಶಾಂತಿ ಕೆ.ಅಪ್ಪಣ್ಣ ಹೀಗೆ ಕನ್ನಡ ಕಥಾ ಪರಂಪರೆಯಲ್ಲಿನ ಪ್ರಾತಿನಿಧಿಕ ಕಥೆಗಾರರ ಆಯ್ದ ಕಥೆಗಳನ್ನು ಬಾನುಲಿಗೆ ಅಳವಡಿಸಿಕೊಂಡು, ಕೇಳುಗರಿಗೆ ಕೇಳಿಸಿತು.
ಕಥೆಗಾರರೂ ಆಗಿರುವ ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ. ಬಸು ಬೇವಿನಗಿಡದ ಅವರ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ 2022ರಸೆಪ್ಟೆಂಬರ್ನಲ್ಲಿ ಆರಂಭಗೊಂಡು 2023ರ ಫೆಬ್ರುವರಿವರೆಗೆ ವಾರಕ್ಕೊಂದು ಕಥೆಯಂತೆ ಬಿತ್ತರಿಸಲಾಯಿತು. ಧಾರವಾಡ ಆಕಾಶವಾಣಿ ಹಾಗೂ ಧಾರವಾಡ ವಿವಿಧಭಾರತಿ ಕೇಂದ್ರಗಳಿಂದ ಪ್ರಸಾರಗೊಂಡಿತು.
ಬಾಗಲಕೋಟೆಯ ಬಿವಿವಿ ಸಂಘದ ಬಸವೇಶ್ವರ ಮಾನವ ಸಂಪನ್ಮೂಲ ಅಭಿವೃದ್ಧಿ ಸಂಸ್ಥೆ ಪ್ರಾಯೋಜಿಸಿತು. ಡಾ. ಬಸು ಬೇವಿನಗಿಡದ ಮತ್ತು ಸುರೇಖಾ ಸುರೇಶ ಅವರು ಕಥೆಗಳನ್ನು ನಿರೂಪಿಸಿ, ಪಾತ್ರಗಳಿಗೆ ತಕ್ಕಂತೆ ವಾಚಿಸಿದರು. ಆಕಾಶವಾಣಿಯ ಶರಣಬಸವ ಚೋಳಿನ, ಅರುಣ ನಾಯಕ, ಶಶಿಧರ ನರೇಂದ್ರ, ರಾಖಿ ಹಾನಗಲ್, ಶೈಲಜಾ ರಾಜಕುಮಾರ್, ಉಷಾ ಕುಲಕರ್ಣಿ, ನವೀನ ಮಹಾಲೆ, ಕೆ. ಶಿವರಾಜ್ ಮುಂತಾದವರು ಪಾತ್ರಗಳಿಗೆ ಮಾತಿನ ಅಭಿನಯ ತೊಡಿಸಿದರು. ಚನ್ನಪ್ಪ ಅಂಗಡಿ, ಆನಂದ ಪಾಟೀಲ, ಪ್ರಕಾಶ ಖಾಡೆ, ವೈ.ಜಿ.ಭಗವತಿ ಅವರು ಬಾನುಲಿಗೆ ಅಳವಡಿಸಿದರು.
ಕಾರ್ಯಕ್ರಮ ಕುರಿತು ಪ್ರತಿಕ್ರಿಯಿಸಿದ ಲೇಖಕಿ ಡಾ. ವಿನಯಾ, ‘ಕಥೆಯನ್ನು ಒಂದು ರೂಪದಿಂದ ಮತ್ತೊಂದು ರೂಪಕ್ಕೆ ಅಳವಡಿಸುವಲ್ಲಿನ ಶ್ರಮ ಈ ಕಾರ್ಯಕ್ರಮದ ಮೂಲಕ ಅರಿವಾಯಿತು’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.