ಹುಬ್ಬಳ್ಳಿ: ಇಲ್ಲಿಯ ವಿದ್ಯಾನಗರದ ಸ್ಮಿತಾ ಪಾಟೀಲ ಅವರಿಗೆ ಕೆಲಸ ಕೊಡಿಸುವುದಾಗಿ ಕರೆ ಮಾಡಿ ನಂಬಿಸಿದ ವ್ಯಕ್ತಿ, ಅವರಿಂದ ಬ್ಯಾಂಕ್ ಮಾಹಿತಿ ಪಡೆದು ₹16.96 ಲಕ್ಷ ವರ್ಗಾಯಿಕೊಂಡು ವಂಚಿಸಿದ್ದಾನೆ.
‘ಇಂಟರ್ ಪಬ್ಲಿಕ್ ಅಡ್ವರ್ಟೈಸಿಂಗ್ ಗ್ರೂಪ್’ಲ್ಲಿ ಬಿಡುವಿನ ವೇಳೆಯಲ್ಲಿ ಮನೆಯಿಂದಲೇ ಕೆಲಸ ಮಾಡಬಹುದು ಎನ್ನುವ ಸಂದೇಶವಿರುವ ಲಿಂಕ್ ಅನ್ನು ವಂಚಕ ಸ್ಮಿತಾ ಅವ ಮೊಬೈಲ್ಗೆ ಕಳುಹಿಸಿದ್ದಾನೆ. ಅವರನ್ನು ಸಂಪರ್ಕಿಸಿ, ಮುಂಗಡವಾಗಿ ₹2 ಸಾವಿರ ಖಾತೆಗೆ ವರ್ಗಾಯಿಸಿದ್ದಾನೆ. ನಂತರ ಅವರಿಗೆ ಕೆಲಸ ನೀಡುವ ನೆಪದಲ್ಲಿ ಪೇಯ್ಡ್ ಟಾಸ್ಕ್ (ವರ್ಗಾಯಿಸುವ ಹಣಕ್ಕೆ ದುಪ್ಪಟ್ಟು ಹಣ ನೀಡುವುದು) ಮಾಡಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ಸಾವು: ಎರಡು ದಿನಗಳ ಹಿಂದೆ ಚನ್ನಮ್ಮ ವೃತ್ತದಲ್ಲಿ ಆಟೊ ರಿಕ್ಷಾ ಡಿಕ್ಕಿ ಹೊಡೆದು ಗಾಯಗೊಂಡಿದ್ದ ಸುಳ್ಳ ರಸ್ತೆಯ ದಾಕ್ಷಾಯಣಿ ಮುದಿಗೌಡರ (62) ಕಿಮ್ಸ್ನಲ್ಲಿ ಮೃತಪಟ್ಟಿದ್ದಾರೆ.
ಮಾ. 29ರಂದು ಶಿವಕುಮಾರ ಹೆಬ್ಬಾಳ ಅವರು ನೀಲಿಜಿನ್ ರಸ್ತೆಯಿಂದ ಹಳೇ ಬಸ್ನಿಲ್ದಾಣದ ಕಡೆ ಆಟೊ ಚಲಾಯಿಸಿಕೊಂಡು ಬರುವಾಗ, ಚನ್ನಮ್ಮ ವೃತ್ತದ ಬಳಿ ರಸ್ತೆ ದಾಟುತ್ತಿದ್ದ ದಾಕ್ಷಾಯಣಿ ಅವರಿಗೆ ಡಿಕ್ಕಿ ಹೊಡೆದಿದ್ದರು. ಗಂಭಿರ ಗಾಯಗೊಂಡಿದ್ದ ಅವರನ್ನು ಕಿಮ್ಸ್ಗೆ ದಾಖಲಿಸಲಾಗಿತ್ತು. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
₹3.17 ಲಕ್ಷ ವಂಚನೆ: ಇಲ್ಲಿಯ ನವನಗರದ ಸ್ವಾತಿ ಎಸ್. ಅವರಿಗೆ ಉದ್ಯೋಗ ಕೊಡಿಸುವುದಾಗಿ ಮೊಬೈಲ್ನಲ್ಲಿ ಸಂಪರ್ಕಿಸಿದ ವ್ಯಕ್ತಿ, ಅವರಿಂದ ಬ್ಯಾಂಕ್ ಮಾಹಿತಿ, ಒಟಿಪಿ ಪಡೆದು ₹3.17 ಲಕ್ಷ ವರ್ಗಾಯಿಸಿಕೊಂಡು ವಂಚಿಸಿದ್ದಾನೆ. ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.