ಹುಬ್ಬಳ್ಳಿ: ಉಣಕಲ್ ಗ್ರಾಮದ ಸಿದ್ಧಪ್ಪಜ್ಜನವರ ಮೂಲ ಗದ್ದುಗೆ ಮಠದ ಜಾತ್ರಾ ಮಹೋತ್ಸವ ಅಂಗವಾಗಿ ಮಂಗಳವಾರ ಸಾಂಪ್ರದಾಯಿಕವಾಗಿ ಸರಳ ರೀತಿಯಲ್ಲಿ ರಥೋತ್ಸವದ ಶಾಸ್ತ್ರ ಜರುಗಿತು.
ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕಾರಣ ಕಡ್ಡಾಯ ನಿಯಮ ಪಾಲನೆ ಮಾಡಬೇಕು. ತೇರು ಎಳೆಯುವ ಸಮಯದಲ್ಲಿ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಡಳಿತ ಮೊದಲೇ ಸೂಚನೆ ನೀಡಿತ್ತು. ಆದ್ದರಿಂದ ದೇವಸ್ಥಾನ ಸಮಿತಿಯವರು ಮಧ್ಯಾಹ್ನ 3.30ಕ್ಕೇ ಹತ್ತು ಹೆಜ್ಜೆ ತೇರು ಎಳೆದು ಸಂಪ್ರದಾಯ ಮುಗಿಸಿದರು. ತೇರಿನತ್ತ ಬರುತ್ತಿದ್ದ ಹಲವು ಭಕ್ತರನ್ನು ಪೊಲೀಸರು ತಡೆದರು. ಪ್ರತಿ ವರ್ಷ ಸಂಜೆ 5.30ರ ಬಳಿಕ ನಡೆಯುತ್ತಿದ್ದ ರಥೋತ್ಸವಕ್ಕೆ ಸಾವಿರಾರು ಜನ ಸೇರುತ್ತಿದ್ದರು.
ತೇರನ್ನು ಬಣ್ಣ ಬಣ್ಣದ ಹೂವುಗಳಿಂದ ಮತ್ತು ತೆಂಗಿನ ಗರಿಗಳಿಂದ ಅಲಂಕರಿಸಲಾಗಿತ್ತು. ಸಾಂಪ್ರದಾಯಿಕ ರಥೋತ್ಸವದ ಬಳಿಕ ಭಕ್ತರು ತೇರಿಗೆ ನಮಸ್ಕರಿಸಿದರು.
ದೇವಸ್ಥಾನದಲ್ಲಿ ಎಲ್ಲ ಪ್ರಮುಖ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪಲ್ಲಕ್ಕಿ ಉತ್ಸವದ ಮೆರವಣಿಗೆ ಸುತ್ತಲಿನ ಪ್ರಮುಖ ಬಡಾವಣೆಗಳಲ್ಲಿ ಜರುಗಿತು. ರುದ್ರಾಭಿಷೇಕ, ಭಜನೆ ಜರುಗಿದವು. ಪ್ರಸಾದದ ವ್ಯವಸ್ಥೆ ಇರಲಿಲ್ಲ.
ಸಿದ್ಧಪ್ಪಜ್ಜನ ದರ್ಶನಕ್ಕೆ ಭಕ್ತರ ದಂಡೇ ಹರಿದುಬಂತು. ತಂಡೋಪ ತಂಡವಾಗಿ ಬಂದ ಜನ ದೇವರ ದರ್ಶನ ಪಡೆದರು. ದೇವಸ್ಥಾನದ ಕಟ್ಟಡವನ್ನು ಆಕರ್ಷಕವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಅವರಲ್ಲಿ ಕೆಲವರು ಮಾಸ್ಕ್ ಧರಿಸಿದ್ದರೆ, ಇನ್ನೂ ಕೆಲವರು ಧರಿಸಿರಲಿಲ್ಲ.