ಹುಬ್ಬಳ್ಳಿ: ‘ಎಲ್ಲ ಶಾಸಕರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ರಾಜಕೀಯದಲ್ಲಿ ಲಾಬಿ ಮಾಡುವುದು ಸಹಜ ಪ್ರಕ್ರಿಯೆ. ಸಂಪುಟ ವಿಸ್ತರಣೆ ಕುರಿತು ಬಿಜೆಪಿ ಹೈಕಮಾಂಡ್ ಯೋಚಿಸಿ, ತೀರ್ಮಾನ ಕೈಗೊಳ್ಳಲಿದೆ’ ಎಂದು ಹುಬ್ಬಳ್ಳಿ–ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ ಹೇಳಿದರು.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಹೈಕಮಾಂಡ್ ದಕ್ಷಿಣ ಭಾರತದ ವಿದ್ಯಮಾನ, ರಾಜಕೀಯ ಪರಿಸ್ಥಿತಿ, ಜನರ ಅಪೇಕ್ಷೆ ಬಗ್ಗೆ ಗಮನಹರಿಸುತ್ತಿದೆ. ಅದನ್ನು ಆಧರಿಸಿ ಯಾರಿಗೆ ಅವಕಾಶ ನೀಡಬೇಕೆಂದು ನಿರ್ಧರಿಸಲಿದೆ’ ಎಂದು ಹೇಳಿದರು.
‘ಕಾರ್ಯಕ್ರಮವೊಂದರ ಕಾರಣ ದೆಹಲಿಗೆ ಹೋಗಿದ್ದೆ ಅಷ್ಟೇ. ಸಂಪುಟದಲ್ಲಿ ಹಿರಿಯರು ಹಾಗೂ ಯುವಕರು ಸಮ ಪ್ರಮಾಣದಲ್ಲಿದ್ದರೆ ಒಳಿತು. ಏನೇ ಆದರೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುವೆ. ಸದ್ಯ ಅಭಿವೃದ್ಧಿಯತ್ತ ಗಮನ ಹರಿಸುತ್ತಿರುವೆ’ ಎಂದರು.
‘17 ಸಾವಿರ ಕೋಟಿ ಆದಾಯ ಸಂಗ್ರಹವಾಗಿರುವುದು ಇತಿಹಾಸ. ಅಭಿವೃದ್ಧಿಯ ಪರ್ವ ಕಾಲ ಆರಂಭವಾಗಿದೆ. ಇದನ್ನುಕಾಂಗ್ರೆಸ್ನವರು ಕಣ್ಣು, ಮನಸ್ಸು ತೆರೆದು ನೋಡಲಿ. ಪಕ್ಷ ಮುಳುಗಲಿದೆ ಎಂಬ ಹತಾಶೆಯಿಂದ ವಿವಾದಗಳನ್ನು ಸೃಷ್ಟಿಸಿ, ಕೊನೆಗೆ ಒದ್ದಾಡುತ್ತಾರೆ. ಹಿಜಾಬ್ ವಿವಾದ ಸೃಷ್ಟಿಸಿದ್ದೂ ಅವರೇ’ ಎಂದು ಟೀಕಿಸಿದರು.