ಧಾರವಾಡ: ನಗರದಲ್ಲಿ ಹೋಳಿ ಹುಣ್ಣಿಮೆ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಕಾಮನಕಟ್ಟೆಯ ಮಂಟಪ ಕಟ್ಟಿ, ಅಲ್ಲಿ ಕಾಮ, ರತಿಯ ಮೂರ್ತಿಗಳನ್ನು ಗುರುವಾರ ಪ್ರತಿಷ್ಠಾಪಿಸಲಾಗಿದೆ.
ಬೂಸಗಲ್ಲಿ ಹಾಗೂ ರಾಮನಗೌಡ್ರ ಓಣಿಯಲ್ಲಿ ಪ್ರತಿ ವರ್ಷದಂತೆ ಕಾಮ, ರತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ನಗರದ ಕೆಲವು ಕಡೆಗಳಲ್ಲಿ ಮೂರ್ತಿಗಳನ್ನು ಪೂಜಿಸಲಾಯಿತು.
ತರಹೇವಾರಿ ಹೋಳಿ ಹಾಡುಗಳನ್ನು ಹಾಡಲಾಗುತ್ತದೆ. ಹೋಳಿ ಹಾಡಗಳನ್ನು ಕೇಳಲು ಹಾಗೂ ಗಲ್ಲಿ–ಗಲ್ಲಿಗಳಲ್ಲಿ ಅಲಂಕೃತ ಮೂರ್ತಿಗಳನ್ನು ನೋಡಿ ಆನಂದಿಸಲು ಮಹಿಳೆಯರು ತಂಡೋಪತಂಡವಾಗಿ ತೆರಳುತ್ತಿದ್ದಾರೆ. ಶನಿವಾರ ಕಾಮದಹನ ಮಾಡಲಾಗುತ್ತದೆ.
ಶನಿವಾರ ನಡೆಯಲಿರುವ ಬಣ್ಣದ ಹಬ್ಬಕ್ಕೆ ಈಗಲೇ ತಯಾರಿ ಆರಂಭಗೊಂಡಿದೆ. ಎಲ್ಲೆಡೆ ಹಲಗೆ ಸದ್ದು ಕಿವಿಗಪ್ಪಳಿಸುತ್ತಿವೆ. ಬಣ್ಣಗಳ ಖರೀದಿ ಭರಾಟೆ ಜೋರಾಗಿದೆ. ಇದರೊಂದಿಗೆ ಬಣ್ಣ ಎರಚುವ ಪಿಚಕಾರಿ ಹಾಗೂ ಇನ್ನಿತರ ಹೊಸ ಸಾಧನಗಳ ಖರೀದಿಯೂ ಮಾರುಕಟ್ಟೆಯಲ್ಲಿ ಕಂಡುಬರುತ್ತಿದೆ.