ಹುಬ್ಬಳ್ಳಿ: ‘ಡಾ.ಬಿ.ಆರ್. ಅಂಬೇಡ್ಕರ್ ಅವರು ಎಲ್ಲರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ್ದರು. ಅವರು ನಿರಂತರ ಶೋಷಣೆಗೆ ಒಳಪಟ್ಟರೂ, ಯಾವುದೇ ವರ್ಗಕ್ಕೆ ಅನ್ಯಾಯ ಮಾಡದೆ ಸರ್ವರ ಹಿತಕ್ಕೆ ಬದ್ಧರಾಗಿ ಸಂವಿಧಾನ ರಚನೆ ಮಾಡಿದರು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಮುಖ್ಯ ಅಂಚೆ ಕಚೇರಿ ಮುಂದೆ ಇರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಗುರುವಾರ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಭಾರತದ ಸುತ್ತ–ಮುತ್ತಲಿನ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಆದರೆ, ಭಾರತವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿ ಗುರುತಿಸಿಕೊಂಡಿದೆ. ಇದಕ್ಕೆ ನಮ್ಮ ಸಂವಿಧಾನವೇ ಕಾರಣ’ ಎಂದರು.
ಪಾಲಿಕೆ ಸದಸ್ಯ ಸಂತೋಷ ಚವ್ಹಾಣ, ಪ್ರಭು ನವಲಗುಂದಮಠ, ರಂಗಾ ಬದ್ದಿ,ಮಹೇಂದ್ರ ಕೌತಾಳ ಇದ್ದರು.
ಶಾಸಕ ಪ್ರಸಾದ ಅಬ್ಬಯ್ಯ ಮಾತನಾಡಿ, ‘ಡಾ.ಬಿ.ಆರ್ ಅಂಬೇಡ್ಕರ್ ಅವರು ಈಗ ನಮ್ಮೊಂದಿಗಿಲ್ಲ. ಆದರೆ, ಅವರು ನೀಡಿರುವ ಸಂವಿಧಾನ ಇದೆ. ಸಂವಿಧಾನವನ್ನು ನಾವೆಲ್ಲರೂ ಉಳಿಸಿಕೊಳ್ಳಬೇಕಿದೆ. ನಮ್ಮದು ಬಹುತ್ವದ ದೇಶ. ಕೆಲವರು ಇದನ್ನು ಛಿದ್ರ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದಕ್ಕೆ ಅವಕಾಶ ಕಲ್ಪಿಸಬಾರದು’ ಎಂದರು.
ಅನಿಲಕುಮಾರ ಪಾಟೀಲ,ಪ್ರಕಾಶ ಬುರಬುರೆ, ರಜತ್ ಉಳ್ಳಾಗಡ್ಡಿಮಠ ಇದ್ದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ ಮಾಲಾರ್ಪಣೆ ಮಾಡಿದರು.