ಹುಬ್ಬಳ್ಳಿ: ಉತ್ತರ ಕರ್ನಾಟಕದಲ್ಲಿ ಯೋಗ, ಧ್ಯಾನ, ಪ್ರಾಣಾಯಾಮ, ನ್ಯಾಚರೋಪತಿ ಮತ್ತು ಸಿರಿಧಾನ್ಯ ಕೃಷಿ ಉತ್ತೇಜಿಸುವ ಸಲುವಾಗಿ ಅಮೆರಿಕಾದ ಫ್ಲೋರಿಡಾದ ಯೋಗಾ ವಿಶ್ವವಿದ್ಯಾಲಯವು ತಾಲ್ಲೂಕಿನ ಪರಸಾಪುರ ಗ್ರಾಮದಲ್ಲಿ ಪ್ರಾದೇಶಿಕ ಶಾಖೆ ಮತ್ತು ಢವಳಗಿ ಸಾವಯವ ಕೃಷಿ ಫಾರ್ಮ್ ಆರಂಭಿಸಿದೆ.
ಆನ್ಲೈನ್ ಮೂಲಕ ಶಾಖೆ ಉದ್ಘಾಟಿಸಿದ ವಿದ್ವಾಂಸ ಅರಳು ಮಲ್ಲಿಗೆ ಪಾರ್ಥಸಾರಥಿ ಮಾತನಾಡಿ ‘ಯೋಗ, ಧ್ಯಾನ, ಪ್ರಾಣಾಯಾಮ ಇಂದಿನ ಅತ್ಯಗತ್ಯವಾಗಿವೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಫ್ಲೋರಿಡಾದ ಯೋಗ ವಿಶ್ವವಿದ್ಯಾಲಯದ ಕುಲಪತಿ ಡಾ. ದೇವರಾಜ ‘ಯೋಗ ಒಂದು ದೇಹದ ಕ್ರಿಯೆಯಷ್ಟೇ ಅಲ್ಲ. ಅದು ಜೀವನದ ಅತ್ಯುನ್ನತ ಸಾಧನೆಗೆ ಸಾಧನವಾಗಿದೆ’ ಎಂದರು.
ವಿಶ್ವವಿದ್ಯಾಲಯದ ನಿರ್ದೇಶಕ ಡಾ. ಶೆಲ್ವನಾರಾಯಣ, ಮನೋರೋಗ ತಜ್ಞ ಡಾ. ಪವನ ವಿ. ಜೋಶಿ, ಆಯುರ್ವೇದ ಕಾಲೇಜಿನ ಪ್ರಾಧ್ಯಾಪಕ ಡಾ. ಎಂ.ಎಂ. ನುಚ್ಚಿ, ಡಾ. ಢವಳಗಿ, ರೂಪಾ ಢವಳಗಿ, ಶಾಂತಣ್ಣ ಕಡಿವಾಣ ಹಾಗೂ ಶ್ರೀನಿವಾಸಮೂರ್ತಿ ಕೊರಳಳ್ಳಿ ಇದ್ದರು. ಶಾಖೆ ಆರಂಭದ ಅಂಗವಾಗಿ 50 ಸಸಿಗಳನ್ನು ನೆಡಲಾಯಿತು.