ಹುಬ್ಬಳ್ಳಿ: ‘ರಿಲಯನ್ಸ್ ಕಂಪನಿಯ ಅಂಬಾನಿ ಶ್ರೀಮಂತರಾದರೆ ನಮಗೆ ಅನುಕೂಲವೇ ಆಗುತ್ತದೆ. ಅವರು ಕಟ್ಟುವ ತೆರಿಗೆಯಿಂದ ಬಡವರಿಗೆ ಅಗತ್ಯವಾದ ಮೂಲಸೌಲಭ್ಯಗಳನ್ನು ಕಲ್ಪಿಸಬಹುದು. ನಮ್ಮದೇ ರಕ್ತ ಜಗತ್ತು ಆಳಿದರೆ ತಪ್ಪೇನು? ರಿಲಯನ್ಸ್ ಕಂಪನಿ ಜಾಗತಿಕ ಮಟ್ಟದಲ್ಲಿ ಬೆಳೆದರೆ ನಾವು ಯಾಕೆ ಬೇಸರ ಮಾಡಿಕೊಳ್ಳಬೇಕು’ ಎಂದು ಸಚಿವ ಅನಂತಕುಮಾರ್ ಹೆಗಡೆ ಪ್ರಶ್ನಿಸಿದರು.
ನಗರದಲ್ಲಿ ಬಿಜೆಪಿ ಅಂಗ ಸಂಸ್ಥೆ ಲಘು ಉದ್ಯೋಗ ಭಾರತಿ ಭಾನುವಾರ ಏರ್ಪಡಿಸಿದ್ದ ಮಧ್ಯಮ, ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗಳಲ್ಲಿನ ಉದ್ಯೋಗ ಅವಕಾಶಗಳು ಕುರಿತು ಭಾನುವಾರ ಏರ್ಪಡಿಸಿದ್ದ ಎರಡು ದಿನಗಳ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
'ಕೆಲವರು ಇಟಲಿ ಮೂಲದ ಕಂಪನಿಗೆ ನಿರ್ಮಾಣ ಗುತ್ತಿಗೆ ಸಿಕ್ಕರೆ ಖುಷಿಯಾಗುತ್ತದೆ. ಆದರೆ, ಅವರು ಕಟ್ಟುವ ತೆರಿಗೆ ನಮಗೆ ಸಿಗುವುದಿಲ್ಲ. ರಿಲಯನ್ಸ್, ಟಾಟಾ ಯಾರೇ ಆಗಲಿ ಅವರಿಗೆ ಅನುಕೂಲ ಮಾಡಿಕೊಟ್ಟರೆ ತೆರಿಗೆ ನಮ್ಮ ದೇಶದಲ್ಲೇ ಉಳಿಯುತ್ತದೆ' ಎಂದು ಸಮರ್ಥಿಸಿಕೊಂಡರು.
‘ನಾವು ತೀಟೆ ತೀರಿಸಿಕೊಳ್ಳಲು ಅಧಿಕಾರಕ್ಕೆ ಬಂದಿಲ್ಲ. ದೇಶದ ಜನರನ್ನು ಮೇಲೆತ್ತಲು ಬಂದಿದ್ದೇವೆ. ಮೋದಿ ಅವರು ಪ್ರಜಾಪ್ರಭುತ್ವದ ಆಶಯದಂತೆ ಎಲ್ಲರನ್ನೂ ಒಳಗೊಳ್ಳುವ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ’ ಎಂದರು.