ಹುಬ್ಬಳ್ಳಿ: ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡಬೇಕೆಂದು ಆಗ್ರಹಿಸಿ ದಿ. ಶ್ರೀ ಲಕ್ಷ್ಮಣ ಹಿರೇಕೆರೂರ ಆಟೊ ಚಾಲಕರ ಸಂಘದ ಸದಸ್ಯರು ಸಂಗೊಳ್ಳಿ ರಾಯಣ್ಣ ಪ್ರತಿಮೆ ಎದುರು ಶುಕ್ರವಾರ ಪ್ರತಿಭಟನೆ ನಡೆಸಿದರು.
ಇಂಧನ ಬೆಲೆ ಏರಿಕೆಯ ಪರಿಣಾಮ ಚಾಲಕರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ವಿಮಾ ಮೊತ್ತದ ಪ್ರಮಾಣ ಸಹ ಪ್ರತಿ ವರ್ಷ ಹೆಚ್ಚಳಲಾಗುತ್ತಿದ್ದು ಬಡ ಚಾಲಕರಿಗೆ ಹೊರೆಯಾಗಿದೆ. ಎಫ್ಸಿ ಶುಲ್ಕವೂ ಅಧಿಕವಾಗಿದೆ ಎಂದು ಪ್ರತಿಭಟನಾಕಾರರು ದೂರಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸಂಘಟನೆಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಳ್ಳಾಗಡ್ಡಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯವನ್ನು ಸರ್ಕಾರ ನೀಡಬೇಕು. ಭವಿಷ್ಯ ನಿಧಿ ಯೋಜನೆ ಜಾರಿ ಮಾಡಲು ₹100 ಕೋಟಿ ಅನುದಾನ ತೆಗೆದಿಡಬೇಕು. ಹುಬ್ಬಳ್ಳಿ– ಧಾರವಾಡ ಮಹಾನಗರದಲ್ಲಿ ಆಟೊಗಳ ಸಂಖ್ಯೆ ಮಿತಿ ಮೀರಿದೆ. ಆದ್ದರಿಂದ ಇನ್ನು ಮುಂದೆ ಆಟೊಗಳಿಗೆ ಪರ್ಮಿಟ್ ನೀಡಬಾರದು. ಓಲಾ ಕ್ಯಾಬ್ಗಳನ್ನು ಸಹ ಬಂದ್ ಮಾಡಬೇಕು ಎಂದು ಅವರು ಆಗ್ರಹಿಸಿದರು.
ಗೌರವ ಅಧ್ಯಕ್ಷ ಚೇತನ್ ಹಿರೇಕೆರೂರ, ಅಧ್ಯಕ್ಷ ಹನುಮಂತಪ್ಪ ಎಂ ಪವಾಡಿ, ಉಪಾಧ್ಯಕ್ಷ ಮಂಜುನಾಥ ಎಂ ಉಳ್ಳಾಗಡ್ಡಿ, ಸಹ ಕಾರ್ಯದರ್ಶಿ ರಾಜು ಕಾಲವಾಡ, ಸಂಘಟನಾ ಕಾರ್ಯದರ್ಶಿ ಗೋಪಾಲ ಆರ್ ಗಾಯಕವಾಡ ಇದ್ದರು.
ಎಬಿವಿಪಿ ಹಾಗೂ ಆಟೊ ಚಾಲಕರ ಪ್ರತಿಭಟನೆಯ ಪರಿಣಾಮ ಚನ್ನಮ್ಮ ವೃತ್ತದ ಅಕ್ಕ– ಪಕ್ಕದ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಯಿತು.