ಹುಬ್ಬಳ್ಳಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಉತ್ತರ ಕರ್ನಾಟಕ ಆಟೊ ರಿಕ್ಷಾ ಚಾಲಕರ ಸಂಘದ ಸದಸ್ಯರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಬಡ ವರ್ಗದವರು ಕುಟುಂಬ ನಿರ್ವಹಿಸುವುದು ಕಷ್ಟವಾಗಿದೆ. ಕೂಡಲೇ ಬೆಲೆ ಏರಿಕೆ ಇಳಿಸಬೇಕು ಎಂದು ಆಗ್ರಹಿಸಿದರು.
ರಿಕ್ಷಾ ಚಾಲಕರ ಕಲ್ಯಾಣಕ್ಕಾಗಿ ಆಟೊ ನಿಗಮ ಮಂಡಳಿ ಸ್ಥಾಪಿಸಬೇಕು. ರಿಕ್ಷಾ ಚಾಲಕರನ್ನು ಇಎಸ್ಐ ವ್ಯಾಪ್ತಿಗೆ ತರಬೇಕು. ರಿಕ್ಷಾ ಚಾಲಕರ ಪ್ರಾಧಿಕಾರ ರಚಿಸಬೇಕು. ಅವರ ಮಕ್ಕಳಗೆ ಉಚಿತವಾಗಿ ಉನ್ನತ ಶಿಕ್ಷಣದ ವ್ಯವಸ್ಥೆ ಮತ್ತು ವಿದ್ಯಾರ್ಥಿ ವೇತನ ನೀಡಬೇಕು. ಚಾಲಕರ ಅವಲಂಬಿತ ಕುಟುಂಬಗಳಿಗೆ ₹10 ಲಕ್ಷದವರೆಗೆ ಆರೋಗ್ಯ ವಿಮೆ ನೀಡಬೇಕು. ಅನುಮತಿ ಹೊಂದಿದ ಚಾಲಕರು ಕರ್ತವ್ಯದಲ್ಲಿದ್ದಾಗ ಅಪಘಾತ ಸಂಭವಿಸಿ ಅಂಗಾಂಗ ಕಳೆದುಕೊಂಡರೆ ₹5 ಲಕ್ಷ ಪರಿಹಾರ ಹಾಗೂ ಮರಣ ಹೊಂದಿದರೆ ಚಾಲಕರ ಅವಲಂಬಿತ ಕುಟುಂಬ ಸದಸ್ಯರಿಗೆ ₹10 ಪರಿಹಾರ ನೀಡಬೇಕು. ರಿಕ್ಷಾ ಚಾಲಕರ ಕಾಲೊನಿ ಸ್ಥಾಪಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.