ಹುಬ್ಬಳ್ಳಿ: ಕೋವಿಡ್ನಿಂದ ಶಿಕ್ಷಕರು ಸಾವಿಗೀಡಾಗುತ್ತಿರುವ ಪ್ರಕರಣಗಳು ಶಿಕ್ಷಣ ಇಲಾಖೆ ಮತ್ತು ಶಿಕ್ಷಕರ ಬಳಗದಲ್ಲಿ ಆತಂಕ ಸೃಷ್ಟಿಸಿದ್ದವು. ಇದನ್ನು ಗಂಭೀರ ವಾಗಿ ಪರಿಗಣಿಸಿದ ಸಾರ್ವಜನಿಕ ಶಿಕ್ಷಣ ಇಲಾಖೆ ಧಾರವಾಡ ಜಿಲ್ಲಾ ಶಿಕ್ಷಕರಿಗಾಗಿ ನಡೆಸಿದ ‘ಕೋವಿಡ್ ಜಾಗೃತಿ’ ಕಾರ್ಯಕ್ರಮ ಅವರಲ್ಲಿ ಆತ್ಮಸ್ಥೈರ್ಯ ತುಂಬುವಲ್ಲಿ ಯಶಸ್ವಿಯಾಗಿದೆ.
ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಹಯೋಗ
ದಲ್ಲಿ ವಲಯದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ ಕೋವಿಡ್-19 ವಿಷಮ ಪರಿಸ್ಥಿತಿಯನ್ನು ಧೈರ್ಯವಾಗಿ, ಸಕಾರಾತ್ಮಕವಾಗಿ ನಿಭಾಯಿಸುವ ನಿಟ್ಟಿನಲ್ಲಿ ಚಿಂತಕರು, ವೈದ್ಯರು, ಮನೋ
ವೈದ್ಯರಿಂದ ‘ಆರೋಗ್ಯ ಮಾಲೆ’ ಸರಣಿ ಉಪನ್ಯಾಸಗಳನ್ನು ಏರ್ಪಡಿಸಲಾಗಿತ್ತು.
ಎರಡು ಗಂಟೆ ಕಾರ್ಯಕ್ರಮ: ‘ಏ. 31ರಿಂದ ವರ್ಚುವಲ್ ಉಪನ್ಯಾಸ ಆಯೋಜಿಸಲಾಗುತ್ತಿದೆ. ಪ್ರತಿ ದಿನ ಎರಡು ಗಂಟೆ ಕಾರ್ಯಕ್ರಮ ನಡೆಸಿ ದ್ದೇವೆ’ ಎಂದು ಸಾವರ್ಜನಿಕ ಶಿಕ್ಷಣ ಇಲಾಖೆ ಧಾರವಾಡದ ಉಪ ನಿರ್ದೆಶಕ ಎಂ.ಎಲ್.ಹಂಚಾಟೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.
‘ಕಾರ್ಯಕ್ರಮದಲ್ಲಿ ನಿತ್ಯ 250 ಶಿಕ್ಷಕರು ಭಾಗಿಯಾಗುತ್ತಿದ್ದರು. ಕೋವಿಡ್ ಮೂರನೇ ಅಲೆ, ಲಸಿಕೆ ಕುರಿತು ಜಾಗೃತಿ, ಮಾಹಿತಿ, ಯೋಗ, ಧ್ಯಾನ, ಮಕ್ಕಳಿಗೆ ‘ಕಲಿಸುವುದನ್ನು ಕಲಿಯೋಣ’, ಆರೋಗ್ಯಕರ ಆಹಾರ ಪದ್ಧತಿ ಮುಂತಾದವುಗಳ ಕುರಿತು ಮಾಹಿತಿ ನೀಡಲಾಗಿದೆ’ ಎಂದರು.
ನಿರಂತರ ಕಾರ್ಯಕ್ರಮ: ‘ಶಿಕ್ಷಕರನ್ನು ಕಳೆದುಕೊಂಡ ಕುಟುಂಬದವರ ಸಂಕಷ್ಟ ನೋಡಿ ತುಂಬ ಬೇಸರವಾಯಿತು. ಹೀಗಾಗಿ, ಸೋಂಕಿತ ಶಿಕ್ಷಕರಿಗೆ ಮನೋಸ್ಥೈರ್ಯ ತುಂಬಬೇಕು ಎಂದು ಕಾರ್ಯಕ್ರಮ ಆಯೋಜಿಸಲಾಗಿತ್ತು. ಕೋವಿಡ್ ಸೋಂಕಿತ ಶಿಕ್ಷಕರೆಲ್ಲರೂ ಗುಣಮುಖರಾಗುವವರೆಗೂ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ’ ಎಂದು ತಿಳಿಸಿದರು.
ಅಧಿಕಾರಿಗಳು ವಿಡಿಯೊಗಳ ಮೂಲಕ ಶಿಕ್ಷಕರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ. ಸೋಂಕಿತರು ಬೇಗ ಗುಣಮುಖರಾಗುವಲ್ಲಿ ಅದು ನೆರವಾಗಿದೆ
ಎಚ್.ಆರ್.ಬನ್ನೂರ, ಸಹಶಿಕ್ಷಕ, ಸ.ಕ.ಹಿ.ಪ್ರಾ.ಶಾ, ಚಾಮುಂಡೇಶ್ಚರಿ ನಗರ, ಹುಬ್ಬಳ್ಳಿ
‘ಶಿಕ್ಷಕರಿಗೆ ತರಬೇತಿ, ಮಾರ್ಗದರ್ಶನ’
‘ಜೂನ್ 2ರಿಂದ ‘ಮಕ್ಕಳೊಂದಿಗೆ ಮಾತಾಡಿ’ ಕಾರ್ಯಕ್ರಮ ಆರಂಭಿಸಲಾಗಿದೆ. ಜೂನ್ 14ರಿಂದ ‘ಮಕ್ಕಳ ಆರೋಗ್ಯ ಮಾಲೆ’ ಕಾರ್ಯಕ್ರಮ ಆರಂಭವಾಗಿದೆ. ವಾರಕ್ಕೊಮ್ಮೆ ಇಂತಹ ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶಿಕ್ಷಕರಿಗೆ ತರಬೇತಿ, ಮಾರ್ಗದರ್ಶನ ನೀಡಲಾಗುವುದು’ ಎಂದು ಧಾರವಾಡ ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ್ ಪದಕಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.